ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಚೆಂಡಿಗೆ ಎಂಜಲು ಹಚ್ಚಿದ ರಾಜಸ್ತಾನ್ ರಾಯಲ್ಸ್ ತಂಡದ ರಾಬಿನ್ ಉತ್ತಪ್ಪ ವರ್ತನೆ ವಿರುದ್ಧ ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಪ್ಪನಿಂದ ಇಂತಹ ವರ್ತನೆ ನಿರೀಕ್ಷಿಸಿರಲಿಲ್ಲ ಎಂದು ಅಭಿಮಾನಿಗಳೂ ಅಸಮಾಧಾನಗೊಂಡಿದ್ದಾರೆ.
ಮೂರನೇ ಓವರ್ ನಲ್ಲಿ ಐದನೇ ಬಾಲ್ ಎಸೆತದ ವೇಳೆ ಚೆಂಡಿಗೆ ಉಗುಳು ಹಚ್ಚುತ್ತಿರುವ ದೃಶ್ಯ ವೈರಲ್ ಆಗಿದೆ. ಈ ಸಂದರ್ಭದಲ್ಲಿ ಕೆಕೆಆರ್ ತಂಡದ ಸುನಿಲ್ ನರೇನ್ ಬ್ಯಾಟಿಂಗ್ ಮಾಡುತ್ತಿದ್ದರು.
ಸಾಧಾರಣವಾಗಿ ಬಾಲ್ ಗೆ ಹೊಳಪು ಬರಲಿ, ಹಿಡಿತ ಸಿಗಲಿ ಎಂಬ ಕಾರಣಗಳಿಗೆ ಬೌಲರ್ ಗಳು ಉಗುಳು ಹಚ್ಚಿ ಒರೆಸುತ್ತಾರೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದಕ್ಕೆ ನಿಷೇಧ ಹೇರಿತ್ತು.
ಆರಂಭದಲ್ಲಿ ಇದಕ್ಕೆ ಅವಕಾಶ ಇದೆಯಾದರೂ ಅಂಪೈರ್ ಈ ಬಗ್ಗೆ ಸೂಚಿಸುತ್ತಾರೆ. ಪದೇ ಪದೇ ಈ ಕೃತ್ಯ ಎಸಗುವಂತಿಲ್ಲ ಎಂದು ಐಸಿಸಿ ಸ್ಪಷ್ಟವಾಗಿ ಸೂಚಿಸಿದೆ. ಅಷ್ಟೇ ಅಲ್ಲದೆ, ಎರಡು ಬಾರಿ ಸೂಚಿಸಿದ ಬಳಿಕವೂ ಈ ವರ್ತನೆ ಮರುಕಳಿಸಿದರೆ ಎದುರಾಳಿ ತಂಡಕ್ಕೆ 5 ರನ್ ಸಿಗಲಿದ್ದು, ಬೌಲರ್ ತಂಡಕ್ಕೆ 5 ರನ್ ದಂಡ ಬೀಳಲಿದೆ. ಹೀಗಾಗಿ ಉತ್ತಪ್ಪ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಕೂಗೂ ಕೇಳಿಬಂದಿದೆ.