ಗುರುಗ್ರಾಮ್: ಕುಟುಂಬದ ಒಪ್ಪಿಗೆ ಇಲ್ಲದೇ ಅನ್ಯ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದ 22 ವರ್ಷದ ಯುವತಿಯನ್ನು ಆಕೆಯ ಪೋಷಕರು ಮತ್ತು ಸಹೋದರ ಕತ್ತು ಹಿಸುಕಿ ಕೊಂದಿರುವ ಘಟನೆ ಗುರುಗ್ರಾಮ್ನಲ್ಲಿ ನಡೆದಿದೆ.
ಈ ಪ್ರಕರಣವನ್ನು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳನ್ನು ಜಜ್ಜರ್ ಜಿಲ್ಲೆಯ ಅವರ ಗ್ರಾಮದಿಂದ ಶುಕ್ರವಾರ ಬಂಧಿಸಲಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಮಹಿಳೆಯನ್ನು ಸುರ್ಹೇಟಿ ಗ್ರಾಮದ ನಿವಾಸಿ ಅಂಜಲಿ ಎಂದು ಗುರುತಿಸಲಾಗಿದೆ. ಇದೇ ಗ್ರಾಮದ ಪಬ್ನಲ್ಲಿ ಕೆಲಸ ಮಾಡುತ್ತಿರುವ ಸಂದೀಪ್ ಅವರನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಯುವತಿ ವಿವಾಹವಾಗಿದ್ದರು. ಅವರು ಸೆಕ್ಟರ್ 102 ರಲ್ಲಿ ಬಾಡಿಗೆ ಫ್ಲಾಟ್ನಲ್ಲಿ ವಾಸಿಸುತ್ತಿದ್ದರು. ಸಂದೀಪ್ ಅವರು ನೀಡಿದ ದೂರಿನ ಪ್ರಕಾರ, ಗುರುವಾರ ಮನೆಯಿಂದ ಹೊರಗೆ ಹೋದಾಗ ಅಂಜಲಿಯನ್ನು ಆಕೆಯ ಪೋಷಕರು ಮತ್ತು ಸಹೋದರರು ಕೊಂದು ಆಕೆಯ ಶವವನ್ನು ಅವರ ಸ್ವಗ್ರಾಮದಲ್ಲಿ ಸುಟ್ಟು ಪುರಾವೆ ನಾಶಪಡಿಸಲು ಪ್ರಯತ್ನಿಸಿದ್ದಾರೆ.
ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂದೀಪ್ ಅವರ ಸಹಚರರೊಬ್ಬರು ಅವರಿಗೆ ಕರೆ ಮಾಡಿ ಅವರ ಪತ್ನಿ ಅಂಜಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಕುಟುಂಬ ಸದಸ್ಯರು ಗ್ರಾಮದ ಸುರ್ಹೇಟಿಯಲ್ಲಿ ಅವರ ಅಂತ್ಯಕ್ರಿಯೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಮಾಹಿತಿ ಪಡೆದು ಫ್ಲಾಟ್ಗೆ ಬಂದು ನೋಡಿದಾಗ ಫ್ಲಾಟ್ಗೆ ಬೀಗ ಹಾಕಿರುವುದು ಕಂಡು ಬಂದಿದ್ದು, ನನ್ನ ಪತ್ನಿ ಅಂಜಲಿಯನ್ನು ಆಕೆಯ ತಂದೆ, ತಾಯಿ, ಸಹೋದರ ಹಾಗೂ ಸಹೋದರನ ಪತ್ನಿ ಸೇರಿ ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ನಂತರ, ಗುರುವಾರ ಸಂಜೆ ರಾಜೇಂದ್ರ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಂಜಲಿಯ ತಂದೆ ಕುಲದೀಪ್(44), ತಾಯಿ ರಿಂಕಿ(42) ಮತ್ತು ಸಹೋದರ ಕುನಾಲ್(20) ಅವರನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಪ್ಪಿಗೆಯಿಲ್ಲದೆ ಮಗಳು ಮದುವೆಯಾದಳು. ಇದರಿಂದ ಕುಟುಂಬದ ನೆಮ್ಮದಿ ಹಾಳಾಗಿ ಅಂಜಲಿಯನ್ನು ಕೊಲ್ಲಲು ನಿರ್ಧರಿಸಿದೆ ಎಂದು ಕುಲದೀಪ್ ವಿಚಾರಣೆಯ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.