ಭಾರತೀಯ ಕ್ರಿಕೆಟ್ನ ಸೂಪರ್ಸ್ಟಾರ್ ಸಚಿನ್ ತೆಂಡೂಲ್ಕರ್ ಹಾಗೂ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ನಡುವೆ ಆಟದ ಮೈದಾನದಲ್ಲಿ ಬಹಳಷ್ಟು ಬಾರಿ ಸೆಣಸಾಟಗಳು ನಡೆದಿವೆ.
ಮೈದಾನದಾಚೆಗೆ ಇಬ್ಬರೂ ಆಟಗಾರರ ನಡುವೆ ಸ್ನೇಹ ಚೆನ್ನಾಗಿದ್ದು, ಆಗಾಗ ಇಬ್ಬರೂ ಬಹಳಷ್ಟು ಬಾರಿ ತಮಾಷೆ ಮಾಡುವ ಘಟನೆಗಳಿಗೇನೂ ಕಮ್ಮಿ ಇಲ್ಲ.
ಇಂಥ ಪ್ರಸಂಗವೊಂದನ್ನು ನೆನೆದ ಅಖ್ತರ್, 2007ರಲ್ಲಿ ಭಾರತ ಪ್ರವಾಸಕ್ಕೆ ಪಾಕಿಸ್ತಾನ ತಂಡ ಬಂದಿದ್ದಾಗ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರ ಬಗ್ಗೆ ಮಾತನಾಡಿದ್ದಾರೆ. ಆ ವೇಳೆ ಸಚಿನ್ರನ್ನು ಮೇಲೆತ್ತಲು ತಾವು ಮಾಡಿದ ಯತ್ನ ಫಲಗೂಡದೇ ಸಚಿನ್ ಕೆಳಗೆ ಬಿದ್ದರು ಎಂದು ಅಖ್ತರ್ ತಿಳಿಸಿದ್ದಾರೆ.
“ಪಾಕಿಸ್ತಾನ ಬಿಟ್ಟರೆ ನನಗೆ ಅತಿ ಹೆಚ್ಚು ಪ್ರೀತಿ ಸಿಕ್ಕಿರುವುದು ಭಾರತದಲ್ಲಿ. ಭಾರತ ಪ್ರವಾಸದ ವೇಳೆ ನನಗೆ ಬಹಳಷ್ಟು ಸುಂದರ ನೆನಪುಗಳು ಸಿಕ್ಕಿವೆ. 2007ರ ಪ್ರವಾಸದ ವೇಳೆ ಪ್ರಶಸ್ತಿ ಪ್ರದಾನ ಸಮಾರಂಭವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಆ ಕಾರ್ಯಕ್ರಮದ ಬಳಿಕ ಗೆಟ್ ಟುಗೆದರ್ ಆಯೋಜಿಸಲಾಗಿತ್ತು. ಎಂದಿನಂತೆ ನನಗೆ ಏನಾದರೂ ಭಿನ್ನವಾದ ಕೆಲಸ ಮಾಡಲು ಮನಸ್ಸಾಯಿತು. ಹೀಗಾಗಿ ನಾನು ತಮಾಷೆಗೆ ಸಚಿನ್ ತೆಂಡೂಲ್ಕರ್ರನ್ನು ಎತ್ತಿಕೊಳ್ಳಲು ನೋಡಿದೆ. ಅವರನ್ನು ಎತ್ತಿಕೊಳ್ಳುತ್ತಿದ್ದಂತೆ ಸಚಿನ್ ಕೆಳಗೆ ಬಿದ್ದುಬಿಟ್ಟರು. ಸದ್ಯ ಅವರಿಗೆ ಏನೂ ಆಗಲಿಲ್ಲ. ಒಂದು ಕ್ಷಣ ನಾನು ಸತ್ತೆ ಎಂದು ಭಯವಾಗಿಬಿಟ್ಟಿತ್ತು” ಎಂದು ಕ್ರೀಡಾ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದ ವೇಳೆ ಅಖ್ತರ್ ಹೇಳಿಕೊಂಡಿದ್ದಾರೆ.
ಜೀವನಶೈಲಿ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಸೈಕ್ಲಿಂಗ್ ಹೇಗೆ ಪರಿಣಾಮಕಾರಿ….?
“ಆ ವೇಳೆ ಸಚಿನ್ ಏನಾದರೂ ಗಾಯಗೊಂಡು ಮುಂದಿನ ಪಂದ್ಯದಲ್ಲಿ ಆಡಲು ಸಾಧ್ಯವಾಗದೇ ಇದ್ದರೆ ನನಗೆ ಭಾರತೀಯ ವೀಸಾ ಸಿಗುವುದಿಲ್ಲ, ಭಾರತೀಯರು ನನಗೆ ಮತ್ತೆ ತಮ್ಮ ದೇಶಕ್ಕೆ ಬರಲು ಬಿಡುವುದಿಲ್ಲ ಹಾಗೂ ಬಂದರೆ ಜೀವಂತ ಸುಟ್ಟುಬಿಡುವರೇನೋ ಎಂಬ ಭಯವಿತ್ತು” ಎಂದು ಅಖ್ತರ್ ಹೇಳಿಕೊಂಡಿದ್ದಾರೆ.