ನಿಮ್ಮ ಜಾತಕದಲ್ಲಿ ಕಾಲ ಸರ್ಪ ದೋಷವಿದೆ ಎಂದು ಹೇಳೋದನ್ನು ನೀವು ಕೇಳಿರಬಹುದು. ಅನೇಕರಿಗೆ ಈ ಕಾಲಸರ್ಪ ದೋಷ ಎಂದರೇನು, ಅದರಿಂದ ಆಗುವ ಸಮಸ್ಯೆ ಏನು ಎಂಬುದು ತಿಳಿದಿಲ್ಲ. ಕಾಲ ಸರ್ಪ ದೋಷವು ವ್ಯಕ್ತಿಯ ಜನನದ ಸಮಯದಲ್ಲಿ ಉಂಟಾಗುತ್ತದೆ. ವ್ಯಕ್ತಿ ಜನನದ ವೇಳೆ ರಾಹು ಮತ್ತು ಕೇತುಗಳು ಮುಖಾಮುಖಿಯಾಗಿದ್ದಾಗ ಮತ್ತು ಎಲ್ಲಾ ಏಳು ಗ್ರಹಗಳು ರಾಹು ಮತ್ತು ಕೇತುಗಳ ಬದಿಯಲ್ಲಿ ಬಂದು, ಇನ್ನೊಂದು ಬದಿಯಲ್ಲಿ ಯಾವುದೇ ಗ್ರಹವಿಲ್ಲದಿರುವಾಗ ಕಾಲ ಸರ್ಪ ದೋಷ ಉಂಟಾಗುತ್ತದೆ. ಇದರಿಂದ ರಾಹು-ಕೇತುಗಳು ಆ ವ್ಯಕ್ತಿಯ ಜಾತಕದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ.
ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ವ್ಯಕ್ತಿಗೆ ಯಶಸ್ಸು ಸಿಗೋದು ಕಷ್ಟವಾಗುತ್ತದೆ. ಆತನ ಪ್ರತಿಭೆ ಸಂಪೂರ್ಣ ಬಳಕೆಯಾಗುವುದಿಲ್ಲ. ಯಾವಾಗಲೂ ಸಂದಿಗ್ಧತೆಯಲ್ಲಿ ಇರಬೇಕಾಗುತ್ತದೆ. ಅದೃಷ್ಟ ಅವರ ಕೈ ಹಿಡಿಯುವುದಿಲ್ಲ. ಕಾಲ ಸರ್ಪ ದೋಷದಲ್ಲಿ 12 ವಿಧಗಳಿವೆ. ನಕ್ಷತ್ರ, ಗ್ರಹಗಳನ್ನು ನೋಡಿ ವ್ಯಕ್ತಿ ಯಾವ ದೋಷದಿಂದ ಬಳಲುತ್ತಿದ್ದಾನೆ ಎಂಬುದನ್ನು ಪತ್ತೆ ಮಾಡಲಾಗುತ್ತದೆ.
ಕಾಲ ಸರ್ಪ ದೋಷದಿಂದ ಬಳಲುವ ವ್ಯಕ್ತಿಗೆ ಯಾವಾಗ್ಲೂ ಹಾವಿನ ಕನಸು ಕಾಣುತ್ತದೆ. ಸತ್ತವರ ಕನಸು ಕಾಣುತ್ತದೆ. ಜೀವಂತ ಇರುವ ವ್ಯಕ್ತಿ ಸತ್ತಂತೆ ಕನಸು ಬೀಳುತ್ತದೆ. ಈ ವ್ಯಕ್ತಿಗಳು ಸದಾ ಭಯದಲ್ಲಿರುತ್ತಾರೆ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಭಾವಿಸುತ್ತಾರೆ. ಹಾವು ತನ್ನ ಕಾಲ ಕೆಳಗಿದ್ದು, ಕಚ್ಚುತ್ತದೆ ಎಂಬ ಆತಂಕದಲ್ಲಿರುತ್ತಾರೆ. ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಸದಾ ಜಗಳವಾಡುವ ಕನಸುಗಳನ್ನು ಕಾಣ್ತಿರುತ್ತಾರೆ.
ಕಾಲಸರ್ಪ ದೋಷಕ್ಕೆ ಪರಿಹಾರ : ಜಾತಕದಲ್ಲಿ ಕಾಲಸರ್ಪ ದೋಷವಿದ್ದರೆ ಶಿವನನ್ನು ಪೂಜಿಸಿ. ಶಿವ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ನೀರನ್ನು ಅರ್ಪಿಸಿ. ಪ್ರದೋಷ ತಿಥಿಯಂದು ಶಿವನಿಗೆ ಜಲಾಭಿಷೇಕ ಮಾಡಿ. ಮಹಾಮೃತ್ಯುಂಜಯ ಮಂತ್ರವನ್ನು ಪ್ರತಿದಿನ 108 ಬಾರಿ ಜಪಿಸಿ. ನಿಮ್ಮ ಜಾತಕವನ್ನು ಜ್ಯೋತಿಷ್ಯಿಗಳಿಗೆ ತೋರಿಸಿ ಅದ್ರ ಮೂಲಕವೂ ಪರಿಹಾರ ಕಂಡುಕೊಳ್ಳಬಹುದು.
ದೋಷ ಪರಿಹಾರ ಆಗ್ತಿದ್ದಂತೆ ಜೀವನದಲ್ಲಿ ನೆಮ್ಮದಿ ಸಿಗುತ್ತದೆ. ಶಾಂತಿ ನೆಲೆಸುತ್ತದೆ. ಅದೃಷ್ಟದ ಬಾಗಿಲು ತೆರೆಯುತ್ತದೆ. ರಾತ್ರಿ ಕೆಟ್ಟ ಸ್ವಪ್ನವಿಲ್ಲದೆ ನಿದ್ರೆ ಬರುತ್ತದೆ. ಜೀವನದಲ್ಲಿ ಪ್ರಗತಿ ಸಿಗುತ್ತದೆ.