alex Certify ʼಲೋ ಬಿಪಿʼ ಮತ್ತು ʼಹೃದಯಾಘಾತʼ ದ ನಡುವೆ ಸಂಬಂಧವಿದೆಯಾ….? ಇಲ್ಲಿದೆ ಮಹತ್ವದ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲೋ ಬಿಪಿʼ ಮತ್ತು ʼಹೃದಯಾಘಾತʼ ದ ನಡುವೆ ಸಂಬಂಧವಿದೆಯಾ….? ಇಲ್ಲಿದೆ ಮಹತ್ವದ ವಿವರ

ಸ್ಯಾಂಡಲ್‌ವುಡ್‌ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾರ ಹಠಾತ್‌ ಸಾವು ಇಡೀ ದೇಶಕ್ಕೇ ಆಘಾತ ತಂದಿದೆ. ಕೇವಲ 37ನೇ ವಯಸ್ಸಿಗೇ ಸ್ಪಂದನಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಮಾಹಿತಿ ಪ್ರಕಾರ ರಕ್ತದೊತ್ತಡದಲ್ಲಾದ ತೀವ್ರ ಕುಸಿತದಿಂದ ಸ್ಪಂದನಾ ಹೃದಯಾಘಾತಕ್ಕೊಳಗಾದರು. ಕಡಿಮೆ ರಕ್ತದೊತ್ತಡ ಮತ್ತು ಹೃದಯಾಘಾತಕ್ಕೆ ಸಂಬಂಧವಿದೆಯೇ? ಇದರಿಂದ ಪಾರಾಗಲು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

ವೈದ್ಯರು ಹೇಳುವ ಪ್ರಕಾರ ಅಧಿಕ ಮತ್ತು ಕಡಿಮೆ ರಕ್ತದೊತ್ತಡ ಇವೆರಡೂ ಅಪಾಯಕಾರಿಯೇ. ದೀರ್ಘಕಾಲದಿಂದ ಲೋ ಬಿಪಿ ಸಮಸ್ಯೆ ಇದ್ದರೆ ಹೃದಯರಕ್ತನಾಳಗಳಿಗೆ ಸಮಸ್ಯೆ ಆಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಹೃದ್ರೋಗ ತಜ್ಞರು. “ರಕ್ತದೊತ್ತಡವು ಸಾಮಾನ್ಯಕ್ಕಿಂತ ಕಡಿಮೆಯಿದ್ದಾಗ ಹೃದಯ ಮತ್ತು ದೇಹದ ಇತರ ಪ್ರಮುಖ ಅಂಗಗಳಿಗೆ ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ. ಇದು ದೀರ್ಘಕಾಲದವರೆಗೆ ಮುಂದುವರಿದರೆ ಹೃದಯದ ಸ್ನಾಯುಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.

ಲೋ ಬಿಪಿ ಸಮಸ್ಯೆ ಅನೇಕರಲ್ಲಿ ಇರುತ್ತದೆ. ಇದು ಯಾವುದೇ ಪ್ರಮುಖ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಆದಾಗ್ಯೂ ಸಾಮಾನ್ಯ ಅಥವಾ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಯಲ್ಲಿ ಇದ್ದಕ್ಕಿದ್ದಂತೆ ಬಿಪಿ ಕುಸಿದಾಗ ಅದು ಸಾವಿಗೆ ಕಾರಣವಾಗಬಹುದು. ಹೃದಯದ ಸಮಸ್ಯೆಗಳು, ತೀವ್ರ ಸೋಂಕುಗಳು, ಅಂತಃಸ್ರಾವಕ ಸಮಸ್ಯೆಗಳು, ತೀವ್ರ ರಕ್ತದ ನಷ್ಟ ಇವೆಲ್ಲ ಲೋ ಬಿಪಿಗೆ ಕಾರಣವಾಗುವ ಅಂಶಗಳು. ಅತಿಸಾರ ಕೂಡ ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ದೇಹದಾದ್ಯಂತ ಹರಡುವ ನ್ಯುಮೋನಿಯಾದಂತಹ ಶ್ವಾಸಕೋಶದ ಸೋಂಕು ಕಡಿಮೆ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಆದರೆ ಇದು ಪರಿಹರಿಸಬಲ್ಲ ಸಮಸ್ಯೆ, ನೇರವಾಗಿ ಹೃದಯಕ್ಕೆ ಸಂಬಂಧಿಸಿಲ್ಲ ಎಂದು ಕೆಲವು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಯುವತಿಯರಲ್ಲಿ ಹೃದಯಾಘಾತಕ್ಕೆ ಆನುವಂಶಿಕ ಅಂಶಗಳು ಕಾರಣವೇ?

ಮಹಿಳೆಯರಲ್ಲಿ ಅನೇಕ ಬಾರಿ ಹೃದಯಾಘಾತಕ್ಕೆ ಆನುವಂಶಿಕ ಅಂಶಗಳು ಕಾರಣವಾಗುತ್ತವೆ. ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆ ಇದ್ದರೆ, ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಅಥವಾ ಮಧುಮೇಹದಂತಹ ಸಮಸ್ಯೆ ಯುವತಿಯರಲ್ಲಿ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವೊಮ್ಮೆ ನಿದ್ದೆ ಮಾಡುವಾಗ ಹೃದಯಾಘಾತ ಅಥವಾ ಹೃದಯ ಸ್ತಂಭನವನ್ನು ಅನುಭವಿಸುತ್ತಾರೆ. ಇದು ವ್ಯಕ್ತಿಯ ಪ್ರಸ್ತುತ ಜೀವನಶೈಲಿಯೊಂದಿಗೆ ಪ್ರತ್ಯೇಕವಾಗಿ ಸಂಬಂಧಿಸಿಲ್ಲ, ವಿವಿಧ ಅಂಶಗಳು ಕಾರಣವಾಗಬಹುದು.

ಲೋ ಬಿಪಿ ಸಮಸ್ಯೆ ಇರುವವರು ದೇಹವನ್ನು ಹೈಡ್ರೇಟ್‌ ಆಗಿಟ್ಟುಕೊಳ್ಳಬೇಕು. ಸಾಕಷ್ಟು ಉಪ್ಪು ಮತ್ತು ಖನಿಜಗಳನ್ನು ಹೊಂದಿರುವ ಸಮತೋಲಿತ ಆಹಾರವನ್ನು ಸೇವಿಸಬೇಕು. ರಕ್ತದೊತ್ತಡದ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದು ಬಹಳ ಮುಖ್ಯ. 35 ವರ್ಷಕ್ಕಿಂತ ಮೇಲ್ಪಟ್ಟವರು ವರ್ಷಕ್ಕೆ ಒಮ್ಮೆಯಾದರೂ ಹೃದಯ ರಕ್ತನಾಳದ ತಪಾಸಣೆ ಮಾಡಿಸಿಕೊಳ್ಳಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...