ರಾಜಸ್ಥಾನದ ಉದಯ್ಪುರದಲ್ಲಿ ಕನ್ನಯ್ಯ ಲಾಲ್ ಎಂಬವರನ್ನು ಮುಸ್ಲಿಂ ಮೂಲಭೂತವಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಅಲ್ಲದೆ ಈ ಕೃತ್ಯದ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮೂಲಕ ವೈಶಾಚಿಕತೆ ಮೆರೆದಿದ್ದರು.
ಈ ಬರ್ಬರ ಹತ್ಯೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತಲ್ಲದೆ ಹಂತಕರನ್ನು ಗಲ್ಲಿಗೇರಿಸಬೇಕೆಂಬ ಕೂಗು ಕೇಳಿ ಬಂದಿತ್ತು. ಇದರ ಮಧ್ಯೆ ಬಿಜೆಪಿ ನಾಯಕ ಕಪಿಲ್ ಮಿಶ್ರಾ, ಮೃತ ಕನ್ನಯ್ಯ ಲಾಲ್ ಕುಟುಂಬಕ್ಕೆ ನೆರವಾಗುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದು ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಕೇವಲ ಒಂದು ದಿನದಲ್ಲೇ ಒಂದು ಕೋಟಿ ರೂಪಾಯಿಗಳಿಗೂ ಅಧಿಕ ಹಣ ಸಂಗ್ರಹವಾಗಿದ್ದು, ಈವರೆಗೆ 1.70 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಶುಕ್ರವಾರದಂದು ಕನ್ನಯ್ಯ ಲಾಲ್ ಕುಟುಂಬವನ್ನು ಭೇಟಿ ಮಾಡಿದ್ದ ಕಪಿಲ್ ಮಿಶ್ರಾ ಒಂದು ಕೋಟಿ ರೂಪಾಯಿಗಳ ನೆರವನ್ನು ನೀಡಿದ್ದಾರೆ.
25 ಲಕ್ಷ ರೂಪಾಯಿಗಳನ್ನು ಕನ್ನಯ್ಯ ಲಾಲ್ ಹತ್ಯೆ ವೇಳೆ ಅವರನ್ನು ರಕ್ಷಿಸಲು ಹೋಗಿ ಗಾಯಗೊಂಡಿದ್ದ ಈಶ್ವರ್ ಸಿಂಗ್ ಅವರಿಗೆ, ಗುಂಪು ಹಲ್ಲೆಯಿಂದ ಗಾಯಗೊಂಡಿರುವ ಕಾನ್ಸ್ಟೇಬಲ್ ಸಂದೀಪ್ ಅವರಿಗೆ 5 ಲಕ್ಷ ರೂ. ಹಾಗೂ ಮಹಾರಾಷ್ಟ್ರದ ಅಮರಾವತಿಯಲ್ಲಿ ಕೊಲೆಗೀಡಾದ ಉಮೇಶ್ ಪ್ರಹ್ಲಾದ್ ರಾವ್ ಅವರ ಕುಟುಂಬಕ್ಕೆ 30 ಲಕ್ಷ ರೂಪಾಯಿ ಆರ್ಥಿಕ ನೀಡಲಾಗುವುದು ಎಂದು ಕಪಿಲ್ ಮಿಶ್ರಾ ತಿಳಿಸಿದ್ದಾರೆ.