ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಆಘಾತಕಾರಿ ಘಟನೆಯೊಂದರಲ್ಲಿ ಬಿಜೆಪಿ ಮುಖಂಡರೊಬ್ಬರ ಕಾರು ಆಂಬುಲೆನ್ಸ್ ಗೆ ತಡೆಯೊಡ್ಡಿದರಿಂದ ರೋಗಿಯೊಬ್ಬರು ಸಾವನ್ನಪ್ಪಿರೋ ಆರೋಪ ಕೇಳಿಬಂದಿದೆ.
ಕಾರಿನೊಂದಿಗೆ ರಸ್ತೆಯನ್ನು ತಡೆದಿದ್ದಲ್ಲದೇ ಪ್ರಶ್ನಿಸಿದ ರೋಗಿಯ ಕುಟುಂಬಕ್ಕೆ ಬಿಜೆಪಿ ನಾಯಕ ಬೆದರಿಕೆ ಹಾಕಿದ್ದಾರೆನ್ನಲಾಗಿದೆ. ಬಿಜೆಪಿ ಮುಖಂಡ ಉಮೇಶ್ ಮಿಶ್ರಾ, ನಿರ್ಲಕ್ಷ್ಯದ ಕೃತ್ಯವನ್ನು ಪ್ರಶ್ನಿಸಿದ್ದಕ್ಕೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ರೋಗಿಯ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ರೋಗಿಯಾದ ಸುರೇಶ್ ಚಂದ್ರ ಅವರನ್ನು ಶನಿವಾರ ಎದೆನೋವಿನಿಂದಾಗಿ ತಕ್ಷಣವೇ ಲಕ್ನೋ ಆಸ್ಪತ್ರೆಗೆ ಕಳುಹಿಸಲಾಗುತ್ತಿತ್ತು. ಅವರು ಸೀತಾಪುರ್ ಜಿಲ್ಲಾ ಆಸ್ಪತ್ರೆಯಿಂದ ಹೊರಬಂದು ಲಖ್ನೋಗೆ ಹೋಗಲು ಮುಂದಾದಾಗ ಬಿಜೆಪಿ ಮುಖಂಡ ಉಮೇಶ್ ಮಿಶ್ರಾ ಅವರು ತಮ್ಮ ವ್ಯಾಗನಾರ್ ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಹೋಗಿದ್ದರು.
ಇದರಿಂದ 30 ನಿಮಿಷಕ್ಕೂ ಹೆಚ್ಚು ಕಾಲ ಆಂಬ್ಯುಲೆನ್ಸ್ ಚಲಿಸಲು ಸಾಧ್ಯವಾಗಲಿಲ್ಲ, ಮತ್ತು ಸುರೇಶ್ ಚಂದ್ರ ನೋವಿನಿಂದ ನರಳುತ್ತಾ ಅಂಬುಲೆನ್ಸ್ ಒಳಗೆ ಸಾವನ್ನಪ್ಪಿದರು. ಈ ವೇಳೆಗೆ ಹಿಂದಿರುಗಿದ ಬಿಜೆಪಿ ನಾಯಕನ ಪ್ರಶ್ನಿಸುತ್ತಿದ್ದಂತೆ ಕೋಪದಲ್ಲಿ ಬೆದರಿಕೆ ಹಾಕಿದರು ಎನ್ನಲಾಗಿದೆ.
ಉಮೇಶ್ ಮಿಶ್ರಾ ಅವರು ಮೃತ ವ್ಯಕ್ತಿಯ ಸೋದರ ಮಾವನ ಮೇಲೆ ದೌರ್ಜನ್ಯ ಎಸಗಿರುವುದು ಮತ್ತು ಪೊಲೀಸ್ ಕೇಸ್ಗಳಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕುತ್ತಿರುವುದನ್ನು ಪಕ್ಕದಲ್ಲಿದ್ದವರು ರೆಕಾರ್ಡ್ ಮಾಡಿದ ವೀಡಿಯೊ ತೋರಿಸಿದೆ.
ಉಮೇಶ್ ಮಿಶ್ರಾ, ಮೃತ ವ್ಯಕ್ತಿಯ ಸಂಬಂಧಿಕರನ್ನು ಕೆಣಕಿದಾಗ ಕೆಲವು ಪೊಲೀಸ್ ಸಿಬ್ಬಂದಿ ಅಲ್ಲೇ ಇದ್ದರು. ಆದರೆ ಯಾರೂ ಮಧ್ಯಪ್ರವೇಶಿಸಲಿಲ್ಲ. ನಂತರ ಬಿಜೆಪಿ ಮುಖಂಡ ತನ್ನ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ನಿರ್ಲಕ್ಷ್ಯಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.