ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಮನೆಮನೆಗೆ ತೆರಳಿ ತಾಜ್ಯ ಸಂಗ್ರಹಣೆ ಮಾಡುವ ಸ್ವಚ್ಛವಾಹಿನಿ ವಾಹನವನ್ನ ಖುದ್ದು ಪೆರುವಾಯಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ನಫೀಸಾ ಚಲಾಯಿಸಿ ಕರ್ತವ್ಯ ಪ್ರಜ್ಞೆಗೊಂದು ಉದಾಹರಣೆಯಾಗಿದ್ದಾರೆ.
ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆಯಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ತನ್ನ ಕರ್ತವ್ಯದ ಜೊತೆಗೆ ವಾಹನ ಚಾಲನೆಯ ಹೊಸ ಕೆಲಸವನ್ನು ಮೇ ಮೊದಲನೇ ವಾರದಿಂದ ಪ್ರಾರಂಭಿಸಿದ್ದಾರೆ ಅಂತ ಹೇಳಲಾಗುತ್ತಿದೆ.
ವಾಹನಗಳನ್ನು ಓಡಿಸೋದು ನನಗೆ ಚೆನ್ನಾಗಿ ಗೊತ್ತು. ಇದು ನನಗೆ ಈಗ ಸಹಾಯವಾಗುತ್ತಿದೆ. ಗ್ರಾಮಪಂಚಾಯಿತಿ ಸದಸ್ಯೆ ಮತ್ತು ಉಪಾಧ್ಯಕ್ಷೆಯಾಗಿ ಸ್ವಚ್ಛವಾಹಿನಿ ಓಡಿಸುವ ಕೆಲಸ ಸಿಕ್ಕಿರುವುದು ಸಂತಸ ತಂದಿದೆ. ಡ್ರೈವಿಂಗ್ ಗೆ ಆಯ್ಕೆಯಾದವನು ವಾಹನ ಚಲಾಯಿಸೋದ್ರಲ್ಲಿ ಇನ್ನೂ ಪರ್ಫೆಕ್ಟ್ ಆಗಿಲ್ಲ. ಇದೇ ಕಾರಣಕ್ಕಾಗಿ ಈ ಕೆಲಸವನ್ನ ನಾನೇ ಮಾಡುತ್ತಿದ್ದೇನೆ. ಸದಸ್ಯರು ಹಾಗೂ ಅಧಿಕಾರಿಗಳು ಕೂಡಾ ನಾನು ಮಾಡುತ್ತಿರೋ ಈ ಕೆಲಸವನ್ನ ಪ್ರೋತ್ಸಾಹಿಸುತ್ತಿದ್ದಾರೆ. ಇಡೀ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ವಾರಕ್ಕೆ ಎರಡು ಬಾರಿ ಕಸ ಸಂಗ್ರಹಿಸುತ್ತಿದ್ದೇನೆ. ಪ್ರತಿದಿನ ತ್ಯಾಜ್ಯ ಸಂಗ್ರಹಣೆಗಾಗಿ ನಿರ್ದಿಷ್ಟ ಪ್ರದೇಶಕ್ಕೆ ಭೇಟಿ ನೀಡಲು ನಾವು ಚಾರ್ಟ್ ರೆಡಿ ಮಾಡಿದ್ದೇವೆ. ಆ ಚಾರ್ಟ್ ಪ್ರಕಾರವೇ ಈಗ ನಾವು ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ನಫೀಸಾ.
ಮೊದಲ ಬಾರಿ ಸದಸ್ಯೆಯಾಗಿ ಆಯ್ಕೆಯಾಗಿರುವ ನಫೀಸಾ ಮೊದಲ ಅವಧಿಯಲ್ಲೇ ಪೆರುವಾಯಿ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರು ಮಾಡುತ್ತಿರೋ ಕೆಲಸವನ್ನ ನೋಡಿ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.