alex Certify ಶ್ರೀಮಂತರು, ನೌಕರರು ಸೇರಿ ಎಲ್ಲ ದಲಿತ ಕುಟುಂಬಕ್ಕೆ 10 ಲಕ್ಷ ರೂ.; ದಲಿತ ಬಂಧು ಯೋಜನೆಗೆ ತೆಲಂಗಾಣ ಸಿಎಂ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರೀಮಂತರು, ನೌಕರರು ಸೇರಿ ಎಲ್ಲ ದಲಿತ ಕುಟುಂಬಕ್ಕೆ 10 ಲಕ್ಷ ರೂ.; ದಲಿತ ಬಂಧು ಯೋಜನೆಗೆ ತೆಲಂಗಾಣ ಸಿಎಂ ಚಾಲನೆ

ಹೈದರಾಬಾದ್: ತೆಲಂಗಾಣ ರಾಜ್ಯದ ಪ್ರತಿಯೊಂದು ದಲಿತ ಕುಟುಂಬಕ್ಕೆ 10 ಲಕ್ಷ ರೂ. ಒದಗಿಸುವ ದಲಿತ ಬಂಧು ಯೋಜನೆಗೆ ಚಾಲನೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೀಡಿದ್ದಾರೆ.

ಕರೀಂನಗರ ಜಿಲ್ಲೆಯ ಹುಜುರಾಬಾದ್ ವಿಧಾನಸಭಾ ಕ್ಷೇತ್ರದ ಶಲಪಲ್ಲಿಯಲ್ಲಿ ಯೋಜನೆಯನ್ನು ಪ್ರಾರಂಭಿಸಿದ ನಂತರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಕೆಸಿಆರ್, ಯಾವುದೇ ನಿರ್ಬಂಧಗಳಿಲ್ಲದೇ ಸರ್ಕಾರಿ ಉದ್ಯೋಗಿಗಳಾಗಿದ್ದರೂ ಪ್ರತಿ ಕುಟುಂಬಕ್ಕೆ 10 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದ್ದಾರೆ.

ದಲಿತ ಬಂಧು ಯೋಜನೆಯಡಿ ಪಡೆದ ನೆರವು ವಾಪಸ್ ಕೊಡಬೇಕಿಲ್ಲ. ಸರ್ಕಾರಕ್ಕೆ ಅಥವಾ ಬ್ಯಾಂಕಿಗೆ ಒಂದು ರೂಪಾಯಿ ವಾಪಸ್ ನೀಡುವ ಅಗತ್ಯವಿಲ್ಲ. ಇದು 100 ಪ್ರತಿಶತ ಸಹಾಯಧನ ಯೋಜನೆ ಎಂದು ಅವರು ಹೇಳಿದರು.

ಈಗಿರುವ ಕಲ್ಯಾಣ ಯೋಜನೆಗಳಾದ ಪಿಂಚಣಿ, ಪಡಿತರ ಚೀಟಿಗಳನ್ನು ದಲಿತ ಬಂಧು ನೀಡಿದ ನಂತರವೂ ಮುಂದುವರಿಸಲಾಗುವುದು. ಸರ್ಕಾರವು ದಲಿತ ಬಂಧು ಯೋಜನೆಯನ್ನು ಹುಜುರಾಬಾದ್ ವಿಭಾಗದಲ್ಲಿ ಪ್ರಾಯೋಗಿಕ ಯೋಜನೆಯಾಗಿ ಜಾರಿಗೊಳಿಸುತ್ತಿದೆ. ಹಂತ ಹಂತವಾಗಿ ರಾಜ್ಯದಾದ್ಯಂತ ಜಾರಿಗೊಳಿಸಲಾಗುವುದು. ರಾಜ್ಯದಲ್ಲಿ ಸುಮಾರು 17 ಲಕ್ಷ ದಲಿತ ಕುಟುಂಬಗಳಿವೆ. ನಾವು ಅವರಿಗಾಗಿ ಸುಮಾರು 1.80 ಲಕ್ಷ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಿದ್ಧರಿದ್ದೇವೆ. ನಾವು ಪ್ರತಿ ಬಜೆಟ್‌ನಲ್ಲಿ 30,000 ದಿಂದ 40,000 ಕೋಟಿಗಳನ್ನು ಹಂಚುತ್ತೇವೆ. ಅದನ್ನು 3 ರಿಂದ 4 ವರ್ಷಗಳಲ್ಲಿ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.

ಮೊದಲಿಗೆ ದಲಿತ ಕುಟುಂಬದ ಕಡು ಬಡವರಿಗೆ ನೆರವು ನೀಡಲಾಗುವುದು. ನಂತರ ದಲಿತ ಸರ್ಕಾರಿ ನೌಕರರು, ನಿವೃತ್ತರು ಮತ್ತು ದಲಿತರಲ್ಲಿರುವ ಶ್ರೀಮಂತರು ನೆರವು ಪಡೆಯುವಂತೆ ನಾನು ವಿನಂತಿಸುತ್ತಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ಕೆಸಿಆರ್ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದ್ದು, ಸ್ವ-ಅಭಿವೃದ್ಧಿಗೆ ಬಳಸಿಕೊಳ್ಳಿ ಎಂದು ಮನವಿ ಮಾಡಿದರು. ಫಲಾನುಭವಿಗಳು ತಮ್ಮ ಜ್ಞಾನ ಮತ್ತು ಅನುಭವಕ್ಕೆ ಅನುಗುಣವಾಗಿ ತಮ್ಮ ಸ್ವಂತ ವ್ಯವಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಅವರು ಸಹಾಯ ಬಯಸಿದರೆ, ಜಿಲ್ಲಾಧಿಕಾರಿ ನಿಮಗೆ ಸಹಾಯ ಮಾಡುತ್ತಾರೆ. ನಿಮ್ಮ ವ್ಯಾಪಾರದಿಂದ ನೀವು ಗಳಿಸುವ ಹಣವನ್ನು ಉಳಿಸಿ. ಈ 10 ಲಕ್ಷದಿಂದ ಒಂದು ವರ್ಷದಲ್ಲಿ 20 ಲಕ್ಷ ಮಾಡಿ  ಎಂದು ಹೇಳಿದರು.

ಇದಲ್ಲದೆ, ಪ್ರತಿ ಫಲಾನುಭವಿಗಳಿಂದ 10,000 ರೂ.ಗಳನ್ನು ಕಡಿತಗೊಳಿಸುವ ಸಂರಕ್ಷಣಾ ನಿಧಿಯನ್ನು ಸ್ಥಾಪಿಸುವುದಾಗಿ ಕೆಸಿಆರ್ ಹೇಳಿದರು. ಸರ್ಕಾರವು ಅದೇ ಮೊತ್ತವನ್ನು ಇದಕ್ಕೆ ಸೇರಿಸುತ್ತದೆ. ಇದು ಆರ್ಥಿಕ ಸಂಕಷ್ಟದಲ್ಲಿರುವ ದಲಿತರಿಗೆ ಸಹಾಯ ಮಾಡುತ್ತದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...