ಕಂಠಪೂರ್ತಿ ಕುಡಿದಿದ್ದ ಇಬ್ಬರು ಯುವಕರು ಈ ಅಮಲಿನಲ್ಲಿಯೇ ಪರಸ್ಪರ ಮದುವೆಯಾಗಿದ್ದು, ಕೊನೆಗೆ ಓರ್ವ ಯುವಕನ ಕುಟುಂಬದವರಿಗೆ ವಿಷಯ ತಿಳಿದ ಬಳಿಕ ಮತ್ತೊಬ್ಬ ಯುವಕನಿಗೆ ಹತ್ತು ಸಾವಿರ ರೂಪಾಯಿಗಳನ್ನು ಪರಿಹಾರವಾಗಿ ನೀಡಿ ವಿಷಯ ಇತ್ಯರ್ಥಪಡಿಸಿಕೊಂಡ ವಿಲಕ್ಷಣ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಸಂಗಾರೆಡ್ಡಿ ಜಿಲ್ಲೆಯ ಜೋಗಿ ಪೇಟೆ ನಿವಾಸಿ 21 ವರ್ಷದ ಯುವಕ ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಮೇಡಕ್ ಜಿಲ್ಲೆಯ ಚೆಂಡೂರಿನ 22 ವರ್ಷದ ಯುವಕನೊಂದಿಗೆ ದೇವಾಲಯದಲ್ಲಿ ವಿವಾಹವಾಗಿದ್ದ ಎನ್ನಲಾಗಿದೆ.
ಇವರಿಬ್ಬರು ಮದ್ಯದಂಗಡಿಯೊಂದರಲ್ಲಿ ಭೇಟಿಯಾಗಿದ್ದು, ಆಗಾಗ ಪಾನಗೋಷ್ಠಿ ನಡೆಸುತ್ತಿದ್ದರು. ಹೀಗೆ ಒಮ್ಮೆ ಮಿತಿಮೀರಿ ಕುಡಿದ ಸಂದರ್ಭದಲ್ಲಿ ವಿವಾಹವಾಗುವ ನಿರ್ಧಾರಕ್ಕೆ ಬಂದಿದ್ದು, ಕುಡಿದ ಅಮಲಿನಲ್ಲಿಯೇ ಆಟೋ ಚಾಲಕ ಮತ್ತೊಬ್ಬ ಯುವಕನಿಗೆ ತಾಳಿ ಕಟ್ಟಿದ್ದಾನೆ.
ಬಳಿಕ ಇಬ್ಬರೂ ತಮ್ಮ ತಮ್ಮ ಮನೆಗಳಿಗೆ ಮರಳಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಆಟೋ ಚಾಲಕನ ಮನೆಗೆ ಬಂದ ಮತ್ತೊಬ್ಬ ಯುವಕ ನಾನು ನಿಮ್ಮ ಮಗನನ್ನು ಮದುವೆಯಾಗಿದ್ದೇನೆ ನಿಮ್ಮ ಮನೆಯಲ್ಲಿರಲು ಅವಕಾಶ ಕೊಡಿ ಎಂದಿದ್ದಾನೆ. ಇದರಿಂದ ಆಟೋಚಾಲಕನ ಕುಟುಂಬಸ್ಥರು ತಬ್ಬಿಬ್ಬಾಗಿ ಹೋಗಿದ್ದಾರೆ.
ತಮ್ಮ ಮದುವೆಯನ್ನು ಆಟೋ ಚಾಲಕ ಸಹ ಒಪ್ಪಿಲ್ಲ. ಆಗ ಇನ್ನೊಬ್ಬ ಯುವಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಈ ಸಂಬಂಧದಿಂದ ದೂರವಾಗಬೇಕೆಂದರೆ ಒಂದು ಲಕ್ಷ ರೂಪಾಯಿ ನೀಡಬೇಕೆಂಬ ಬೇಡಿಕೆ ಇಟ್ಟಿದ್ದಾನೆ. ನಂತರ ಆಟೋ ಚಾಲಕನ ಕುಟುಂಬದವರು ಹಾಗೂ ಯುವಕನ ನಡುವೆ ಸಂಧಾನ ನಡೆದಿದ್ದು ಹತ್ತು ಸಾವಿರ ರೂಪಾಯಿಗಳಿಗೆ ಸಮಸ್ಯೆ ಬಗೆಹರಿದಿದೆ ಎನ್ನಲಾಗಿದೆ.