ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಖಾಸಗಿ ಸಾರಿಗೆ ಉದ್ಯಮಕ್ಕೆ ನಷ್ಟ ಉಂಟಾಗಿದ್ದು, ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಿಂದ ಮುಷ್ಕರ ಕೈಗೊಳ್ಳಲಾಗಿದೆ.
ಭಾನುವಾರ ಮಧ್ಯರಾತ್ರಿಯಿಂದ ಖಾಸಗಿ ಸಾರಿಗೆ ಬಂದ್ ಆಗಲಿವೆ. ಈ ಹಿನ್ನೆಲೆಯಲ್ಲಿ ಕೆಲವು ಖಾಸಗಿ ಶಾಲೆಗಳಿಗೆ ಸೋಮವಾರ ಬೆಂಗಳೂರಿನಲ್ಲಿ ರಜೆ ಘೋಷಣೆ ಮಾಡಲಾಗಿದೆ. ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಬಂದ್ ಗೆ ಶಾಲಾ ವಾಹನಗಳ ಮಾಲೀಕರು ಬೆಂಬಲ ಘೋಷಿಸಿದ್ದಾರೆ. ಮಕ್ಕಳಿಗೆ ಶಾಲೆಗೆ ಬಂದು ಹೋಗಲು ತೊಂದರೆಯಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆರ್ಕಿಡ್ ಶಾಲೆ ಸೇರಿದಂತೆ ಕೆಲವು ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಣೆ ಮಾಡಲಾಗಿದೆ.
ಸೋಮವಾರ ಸರಕು ಸಾಗಣೆ ವಾಹನ, ಶಾಲಾ ವಾಹನ, ಟ್ಯಾಕ್ಸಿ, ಖಾಸಗಿ ಬಸ್, ಓಲಾ, ಉಬರ್, ಆಟೋ ರಸ್ತೆಗಿಳಿಯುವುದಿಲ್ಲವೆಂದು ಹೇಳಲಾಗಿದೆ.
ಕರ್ನಾಟಕ ಖಾಸಗಿ ಶಾಲಾ ವಾಹನಗಳ ಯೂನಿಯನ್ ವತಿಯಿಂದ ಖಾಸಗಿ ಸಾರಿಗೆ ಮುಷ್ಕರಕ್ಕೆ ಬೆಂಬಲ ನೀಡಿದ್ದೇವೆ. ಈಗಾಗಲೇ ಅನೇಕ ಶಾಲೆಗಳು ರಜೆ ಘೋಷಣೆ ಮಾಡಿವೆ. ಮತ್ತಷ್ಟು ಶಾಲೆಗಳು ರಜೆ ಘೋಷಿಸಲಿವೆ ಎಂದು ಒಕ್ಕೂಟದ ಪ್ರಮುಖ ಜಿ. ರವಿಕುಮಾರ್ ಹೇಳಿದ್ದಾರೆ.