ನೀನು ಕುಡಿದಿದ್ದೆ ಎಂದು ಹೇಳು, ನಿನ್ನನ್ನು ಉಳಿಸುವುದು ಸುಲಭವಾಗುತ್ತದೆಂದ ಪೊಲೀಸರು ಕೊಲೆ ಬೆದರಿಕೆ ಹಾಕಿದವನಿಗೆ ಸಲಹೆ ನೀಡಿದ ಪ್ರಸಂಗವೊಂದು ನಡೆದಿದೆ.
ಅಜ್ಮೀರ್ ದರ್ಗಾದ ಖಾದೀಮ್ ಆಗಿರುವ ಸಲ್ಮಾನ್ ಚಿಶ್ತಿಯು ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಬಹಿರಂಗವಾಗಿ ಜೀವ ಬೆದರಿಕೆ ಹಾಕಿದ್ದಕ್ಕಾಗಿ ಅಜ್ಮೀರ್ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆದರೆ ಆಘಾತಕಾರಿ ಬೆಳವಣಿಗೆಯಲ್ಲಿ ಜುಲೈ 6 ರಂದು ರಾಜಸ್ಥಾನ ಪೊಲೀಸರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ಇದರಲ್ಲಿ ಪೊಲೀಸ್ ಸಿಬ್ಬಂದಿ ಕೊಲೆ ಬೆದರಿಕೆ ಹಾಕಿದವನಿಗೆ ತರಬೇತಿ ನೀಡುತ್ತಿರುವುದನ್ನು ಕಾಣಬಹುದು.
ನೂಪುರ್ ಶರ್ಮಾಗೆ ಬೆದರಿಕೆ ಹಾಕುವ ಸಂದರ್ಭದಲ್ಲಿ ತಾನು ಕುಡಿದಿದ್ದೆ ಎಂದು ಹೇಳಿದರೆ ರಕ್ಷಿಸುವುದು ಸುಲಭವಾಗುತ್ತದೆ ಎಂದು ಆರೋಪಿ ಸಲ್ಮಾನ್ ಚಿಶ್ತಿ ಹೇಳುವಂತೆ ಪೊಲೀಸರು ಸಲಹೆ ನೀಡುವುದು ವಿಡಿಯೋದಲ್ಲಿ ನೋಡಬಹುದಾಗಿದೆ.
ಶರ್ಮಾ ತಲೆಯನ್ನು ಯಾರಾದರೂ ಕತ್ತರಿಸಿದರೆ ತಮ್ಮ ಮನೆಯನ್ನು ನೀಡುವುದಾಗಿ ಸಲ್ಮಾನ್ ಚಿಶ್ತಿ ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದರು.
ಬುಧವಾರ ವಿಡಿಯೊ ವೈರಲ್ ಆಗುತ್ತಿದ್ದಂತೆ ಅಜ್ಮೀರ್ ಪೊಲೀಸರು ಸಲ್ಮಾನ್ ಚಿಶ್ತಿಯನ್ನು ಅವರ ಮನೆಯಿಂದ ವಶಕ್ಕೆಪಡೆದರು. ಚಿಶ್ತಿಯನ್ನು ತನ್ನ ಮನೆಯಿಂದ ಹೊರಗೆ ಕರೆದೊಯ್ಯುವಾಗ, “ವಿಡಿಯೊ ರೆಕಾರ್ಡ್ ಮಾಡುವಾಗ ನೀವು ನಿಖರವಾಗಿ ಏನು ಮಾಡಿದ್ದೀರಿ?” ಎಂದು ಪೊಲೀಸರು ಕೇಳುತ್ತಾರೆ. ವಿಡಿಯೋ ಮುಂದುವರೆದಂತೆ ಸಲ್ಮಾನ್ ಚಿಶ್ತಿ ತಾನೇನು ಮಾಡಿದೆ ಹೇಳುತ್ತಿರುವುದು ಕೇಳಿಬರುತ್ತಿದೆ. ಈ ಸಮಯದಲ್ಲಿ ಅವರ ಬಳಿ ಇದ್ದ ಪೊಲೀಸ್ ಅಧಿಕಾರಿಯೊಬ್ಬರು, “ನೀವು ಕುಡಿದಿದ್ದೀರಿ ಎಂದು ಹೇಳಿ, ನಿಮ್ಮನ್ನು ಉಳಿಸಲು ಸುಲಭವಾಗುತ್ತದೆ.” ಎಂದು ಸಲಹೆ ಕೊಡುತ್ತಾರೆ.
ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿ, ಅಶೋಕ್ ಗೆಹ್ಲೋಟ್ ಅವರ ಹಿಂದೂ ವಿರೋಧಿ ಮುಖದ ಪುರಾವೆ ಇದು ಎಂದು ಟೀಕಿಸಿದ್ದಾರೆ.
ನೂಪುರ್ ಶರ್ಮಾಗೆ ಬೆದರಿಕೆ ಹಾಕಿರುವ ಸಲ್ಮಾನ್ ಚಿಶ್ತಿ, ನಾನು ನನ್ನ ಹಿರಿಯರ ಮೇಲೆ ಆಣೆ ಮಾಡುತ್ತೇನೆ, ನನ್ನ ತಾಯಿಯ ಮೇಲೆ ಪ್ರಮಾಣ ಮಾಡುತ್ತೇನೆ, ನಾನು ಅವಳನ್ನು ಬಹಿರಂಗವಾಗಿ ಶೂಟ್ ಮಾಡುತ್ತೇನೆ. ನಾನು ನನ್ನ ಮಕ್ಕಳ ಮೇಲೆ ಪ್ರತಿಜ್ಞೆ ಮಾಡುತ್ತೇನೆ, ನೂಪುರ್ ಶರ್ಮನ ತಲೆಯನ್ನು ಯಾರು ತಂದರೂ ಅವರಿಗೆ ಈ ಮನೆಯನ್ನು ಕೊಡುವೆನು ಎಂದು ಕರೆಕೊಟ್ಟಿದ್ದ.