ಅಪಘಾತಕ್ಕೆ ಸಿಲುಕಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ತಮ್ಮ ಆಪ್ತ ಸ್ನೇಹಿತರೊಬ್ಬರ ಜೀವ ಉಳಿಸಿದ ಸಂಚಾರಿ ಪೇದೆಯೊಬ್ಬರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಧನ್ಯವಾದದ ಸಂದೇಶ ಕಳುಹಿಸಿದ್ದಾರೆ.
“ಇಂಥ ಜನರಿಂದಾಗಿಯೇ ಜಗತ್ತು ಇಷ್ಟು ಸುಂದರವಾಗಿದೆ,” ಎಂದು ಸಚಿನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 17ರಂದು ಸಚಿನ್ ಮಾಡಿದ್ದ ಟ್ವೀಟ್ ಅನ್ನು ಮುಂಬಯಿ ಪೊಲೀಸ್ ತನ್ನ ಹ್ಯಾಂಡಲ್ನಲ್ಲಿ ಶೇರ್ ಮಾಡಿಕೊಂಡಿದೆ.
“ಕೆಲ ದಿನಗಳ ಹಿಂದೆ, ಆಪ್ತ ಸ್ನೇಹಿತರೊಬ್ಬರು ಅಪಘಾತಕ್ಕೀಡಾಗಿದ್ದರು. ದೇವರ ದಯೆಯಿಂದ ಅವರೀಗ ಚೆನ್ನಾಗಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಬಂದ ಸಂಚಾರಿ ಪೇದೆಯೊಬ್ಬರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಕೂಡಲೇ ಆಕೆಯನ್ನು ಆಟೋರಿಕ್ಷಾವೊಂದರಲ್ಲಿ ಆಸ್ಪತ್ರೆಗೆ ಕೊಂಡೊಯ್ದ ಅವರು, ಸಮಯಪ್ರಜ್ಞೆ ಮೆರೆಯುವ ಮೂಲಕ ತೀವ್ರವಾಗಿ ಗಾಯಗೊಂಡಿದ್ದ ಆಕೆಯ ಬೆನ್ನುಮೂಳೆಗೆ ಸಂಚಾರದ ವೇಳೆ ಸಾಧ್ಯವಾದಷ್ಟು ಕಡಿಮೆ ಏಟಾಗುವಂತೆ ಖಾತ್ರಿ ಪಡಿಸಿದ್ದಾರೆ. ಕರ್ತವ್ಯದ ಕೂಗನ್ನೂ ಮೀರಿ ಹೋಗುವ ಇಂಥ ಕೆಲವೊಂದು ಮಂದಿ ಇದ್ದಾರೆ,” ಎಂಬುದು ಸಚಿನ್ ಸಂದೇಶದ ಸಾರ.
’ನಿಮಗೂ ಕೆಟ್ಟ ದಿನಗಳು ಬರಲಿವೆ’: ರಾಜ್ಯಸಭಾ ಕಲಾಪದ ವೇಳೆ ಜಯಾ ಬಚ್ಚನ್ ಗರಂ
ನವೆಂಬರ್ 30, ಸಂಜೆ 4:57ಕ್ಕೆ ಘಟಿಸಿದ ಈ ಘಟನೆಯಲ್ಲಿ, ಸಾಂತಾಕ್ರೂಜ಼್ ಪೊಲೀಸ್ ನಿಲ್ದಾಣದ ವ್ಯಾಪ್ತಿಯಲ್ಲಿ ಸಂತ್ರಸ್ತೆ ನಿರುಪಮಾ ಚವಾಣ್, 47, ರಿಕ್ಷಾವೊಂದರಲ್ಲಿ ತೆರಳುತ್ತಿದ್ದ ವೇಳೆ ಭಾರೀ ವಾಹನವೊಂದು ರಿಕ್ಷಾ ಬಳಿ ಇದ್ದ ಸ್ತಂಭವೊಂದಕ್ಕೆ ಗುದ್ದಿದೆ. ಸ್ತಂಭವು ಆಕೆ ಇದ್ದ ರಿಕ್ಷಾ ಮೇಲೆ ಬಿದ್ದು, ಚವಾಣ್ಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳಕ್ಕೆ ಧಾವಿಸಿದ 10-15 ಮಂದಿ ಭಾರೀ ಸ್ತಂಭವನ್ನು ಮೇಲೆತ್ತಿದ್ದಾರೆ. ಇದೇ ವೇಳೆ ಸಂಚಾರಿ ಪೇದೆ ಸುರೇಶ್ ಧೂಮೆ ಒಂದು ಕ್ಷಣವನ್ನೂ ವ್ಯರ್ಥ ಮಾಡದೇ ಆಕೆಯನ್ನು ರಿಕ್ಷಾದ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ನಾನಾವತಿ ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದಾರೆ.
ಏಳು ಗಂಟೆಗಳ ಸರ್ಜರಿ ಬಳಿಕ ಮಹಿಳೆ ಚೇತರಿಸಿಕೊಂಡಿದ್ದು ನಡೆದಾಡುವ ಮಟ್ಟಕ್ಕೆ ಬಂದಿದ್ದಾರೆ. ಡಿಸೆಂಬರ್ 2ರಂದು ಖುದ್ದಾಗಿ ಬಂದು ಧೂಮೆರನ್ನು ಭೇಟಿ ಮಾಡಿದ್ದ ಸಚಿನ್ ತೆಂಡೂಲ್ಕರ್, ಆತನಿಗೆ ಧನ್ಯವಾದ ತಿಳಿಸಿದ್ದರು.