ಬೆಂಗಳೂರು: ಇಷ್ಟು ದಿನ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಸೈಬರ್ ಕಳ್ಳರು ಈಗ ಆನ್ ಲೈನ್ ವಿದ್ಯುತ್ ಬಿಲ್ ಪೇ ನಲ್ಲೂ ಕೈಚಳಕ ತೋರುತ್ತಿದ್ದಾರೆ.
ಬೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡು ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳುವ ನೆಪದಲ್ಲಿ ಸೈಬರರ್ ಕಳ್ಳರು ವ್ಯಕ್ತಿಯೋರ್ವರಿಗೆ ಬರೋಬ್ಬರಿ 53,000 ರೂಪಾಯಿ ದೋಚಿದ್ದಾರೆ.
ಬೆಂಗಳೂರಿನ ಕಾಡುಗೋಡಿ ನಿವಾಸಿ ನಾರಾಯಣ ಪ್ರಸಾದ್ ವಂಚಿನೆಗೊಳಗಾದ ವ್ಯಕ್ತಿ. ಬೆಸ್ಕಾಂ ಅಧಿಕಾರಿ ಎಂದು ಹೇಳಿಕೊಂಡು ನಾರಾಯಣ ಪ್ರಸಾದ್ ಅವರಿಗೆ ವಿದ್ಯುತ್ ಬಿಲ್ ಕಟ್ಟಲು ಹೇಳಿದ್ದಾರೆ. ಬಿಲ್ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತೇವೆ ಎಂದು ಬೆದರಿಸಿದ್ದಾರೆ. ಇದರಿಂದ ನಾರಾಯಣ ಪ್ರಸಾದ್ ವಿದ್ಯುತ್ ಬಿಲ್ ಕಟ್ಟಲು ಮುಂದಾಗಿದ್ದಾರೆ. ನಂತರ ಮೊಬೈಲ್ ಗೆ ಒಂದು ಲಿಂಕ್ ಕಳುಹಿಸಿ, ಅದನ್ನು ಫಾಲೋ ಮಾಡುವಂತೆ ಸೂಚಿಸಿದ್ದಾರೆ. ಲಿಂಕ್ ಕ್ಲಿಕ್ ಮಾಡಿದ ನಾರಾಯಣ ಪ್ರಸಾದ್ ಮೊದಲಿಗೆ 1 ರೂ. ಕಳುಹಿಸಿದ್ದಾರೆ.
ಅಷ್ಟರಲ್ಲಿ ಸೈಬರ್ ಕಳ್ಳರು ಹಂತ ಹಂತವಾಗಿ ನಾರಾಯಣ್ ಪ್ರಸಾದ್ ಅವರ ಅಕೌಂಟ್ ನಿಂದ 53 ಸಾವಿರ ರೂಪಾಯಿ ಎಗರಿಸಿದ್ದಾರೆ. ವಂಚನೆಗೊಳಗಾದ ನಾರಾಯಣ ಪ್ರಸಾದ್ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.