ಪ್ರಾಣಿಗಳ ರಕ್ಷಣೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸೌಲಭ್ಯಗಳ ಬಳಕೆ ಮತ್ತು ಪ್ರದೇಶಗಳಿಗೆ ತಕ್ಕಂತೆ ವಿಧಾನಗಳನ್ನು ಅನುಸರಿಸುತ್ತದೆ. ಅಂಥದ್ದೊಂದು ಕ್ರಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ತ್ವರಿತ ಚಿಂತನೆಯ ರಕ್ಷಣಾ ಕಾರ್ಯಾಚರಣೆಯನ್ನು ತೋರಿಸುವ ವೀಡಿಯೊ ವೈರಲ್ ಆಗುತ್ತಿದೆ.
ಟ್ವಿಟರ್ ಬಳಕೆದಾರರೊಬ್ಬರು ಅಧಿಕಾರಿಗಳು ಮತ್ತು ಸ್ಥಳೀಯರ ಗುಂಪು ಚಿರತೆಯನ್ನು ಬಾವಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಮೊದಲಿಗೆ ಚಿರತೆಯನ್ನ ಬಾವಿಯೊಳಗಿನಿಂದ ರಕ್ಷಿಸಲು ಏಣಿ ಬಿಡಲಾಗಿದೆ. ಆದರೆ ಏಣಿ ಹತ್ತಿ ಬರಲು ಚಿರತೆ ಹಿಂಜರಿದಿದೆ. ಬಳಿಕ ಕೋಲಿಗೆ ಬೆಂಕಿ ಹೊತ್ತಿಸಿ ಬಾವಿಯೊಳಗೆ ಬಿಡಲಾಗಿದೆ. ತಕ್ಷಣ ಬೆದರಿದ ಚಿರತೆ ಏಣಿ ಹತ್ತಿ ಬಾವಿಯೊಳಗಿಂದ ಹೊರಗೆ ಬಂದಿದೆ. ಚಿರತೆ ಬಾವಿಯಿಂದ ಹೊರಬಂದು ಪರಾರಿಯಾಗುವುದನ್ನು ನೋಡಿದ ಜನರು ಹರ್ಷೋದ್ಗಾರ ಮಾಡಿದ್ದಾರೆ.
ಈ ವೀಡಿಯೊದ ಕುರಿತು ಪ್ರತಿಕ್ರಿಯಿಸಿದ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಧಾ ರಾಮೆನ್ “ಪ್ರತಿ ರಕ್ಷಣಾ ಕಾರ್ಯಾಚರಣೆಯು ವಿಶಿಷ್ಟವಾಗಿದೆ. ಮತ್ತು ಪ್ರಾಣಿಗಳ ಜಾತಿಗಳು, ಸಂಪನ್ಮೂಲಗಳ ಲಭ್ಯತೆ, ಸ್ಥಳ, ಮೂಲಸೌಕರ್ಯ ಮತ್ತು ಇನ್ನೂ ಅನೇಕ ಕಾರಣಗಳಿಂದ ಅದರದೇ ಆದ ಸಂಕೀರ್ಣತೆಗಳನ್ನು ಒಳಗೊಂಡಿದೆ. ಉತ್ತಮ ತಂಡ , ಅಂತಹ ಸಂದರ್ಭಗಳನ್ನು ನಿಭಾಯಿಸುವಲ್ಲಿ ಅರಣ್ಯ ಸಿಬ್ಬಂದಿ ಅನುಭವ ಹೊಂದಿದ್ದಾರೆ” ಎಂದು ಮೆಚ್ಚಿದ್ದಾರೆ.
ಇನ್ನೊಬ್ಬ ಭಾರತೀಯ ಅರಣ್ಯ ಸೇವಾ ಅಧಿಕಾರಿ ಅಪೂರ್ವ್ ದೀಕ್ಷಿತ್ ವೀಡಿಯೊವನ್ನು ಮರುಹಂಚಿಕೊಂಡಿದ್ದು , ಕ್ಷೇತ್ರದಲ್ಲಿ ನಾವೀನ್ಯತೆ ಯಾವಾಗಲೂ ಸೂಕ್ತವಾಗಿ ಬರುತ್ತದೆ. ಈ ಕ್ಷೇತ್ರದ ಧೈರ್ಯಶಾಲಿಗಳಿಗೆ ಅಭಿನಂದನೆಗಳು ಎಂದಿದ್ದಾರೆ.