alex Certify ಪ್ರಧಾನಿ ಮೋದಿಗೆ ಪಶ್ಚಿಮ ಬಂಗಾಳದ ಅತ್ಯುತ್ತಮ ಮಾವಿನಹಣ್ಣುಗಳನ್ನು ಕಳುಹಿಸಿದ ದೀದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿಗೆ ಪಶ್ಚಿಮ ಬಂಗಾಳದ ಅತ್ಯುತ್ತಮ ಮಾವಿನಹಣ್ಣುಗಳನ್ನು ಕಳುಹಿಸಿದ ದೀದಿ

ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗಿನ ಸಂಬಂಧ ಹಳಸಿದ್ದರೂ ಪ್ರಧಾನಿ ಮೋದಿಗೆ ಮಾವಿನ ಹಣ್ಣು ಕಳುಹಿಸುವ ಸಂಪ್ರದಾಯವನ್ನು ಸಿಎಂ ಬ್ಯಾನರ್ಜಿ ಹಲವು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದಾರೆ.

ಪಶ್ಚಿಮ ಬಂಗಾಳ ಸಿಎಂ ಬುಧವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಕಚೇರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರಿಗೂ ಪಶ್ಚಿಮ ಬಂಗಾಳದ ಅತ್ಯುತ್ತಮ ಮಾವಿನಹಣ್ಣುಗಳನ್ನು ಕಳಿಸಿಕೊಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಾವಿನಹಣ್ಣುಗಳನ್ನು ಸುಂದರವಾಗಿ ಸುತ್ತಿದ ಉಡುಗೊರೆ ಪೆಟ್ಟಿಗೆಯಲ್ಲಿ ರವಾನಿಸಲಾಗಿದೆ. ಹಿಮಸಾಗರ್, ಲಾಂಗ್ರಾ, ಲಕ್ಷ್ಮಣ್ ಭೋಗ್ ಮತ್ತು ಫಜ್ಲಿ ಸೇರಿದಂತೆ ವಿವಿಧ ತಳಿಯ ಮಾವುಗಳನ್ನು ಪ್ರಧಾನಿ ನಿವಾಸ ಮತ್ತು ಇತರರಿಗೆ ಕಳುಹಿಸಲಾಗಿದೆ. ಒಂದೆರೆಡು ದಿನದಲ್ಲಿ ಮಾವಿನ ಪೆಟ್ಟಿಗೆಗಳು ನವದೆಹಲಿ ತಲುಪಲಿವೆ.

ಕಳೆದ ವರ್ಷ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ್ದರು. 2011ರಲ್ಲಿ ಮುಖ್ಯಮಂತ್ರಿಯಾದಾಗ ಆರಂಭಿಸಿದ ಸಂಪ್ರದಾಯವನ್ನೇ ಟಿಎಂಸಿ ಮುಖ್ಯಸ್ಥೆ ಈಗಲೂ ಮುಂದುವರಿಸಿದ್ದಾರೆ.

ಮಾವಿನ ಹಣ್ಣುಗಳ ಹೊರತಾಗಿ, ಸಿಎಂ ಬ್ಯಾನರ್ಜಿ ಪ್ರಧಾನಿ ಮೋದಿಗೆ ಸಿಹಿತಿಂಡಿಗಳನ್ನು ಸಹ ಕಳುಹಿಸುತ್ತಾರೆ. 2019 ರಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ಟಿಎಂಸಿ ವರಿಷ್ಠರು ಕುರ್ತಾ-ಪೈಜಾಮಾ ಮತ್ತು ಸಿಹಿತಿಂಡಿಗಳನ್ನು ಕಳುಹಿಸಿದ್ದರು ಎಂದು ಖುದ್ದು ಪ್ರಧಾನಿ ಮೋದಿಯವರೇ ಬಹಿರಂಗಪಡಿಸಿದ್ದರು. ವಿರೋಧ ಪಕ್ಷಗಳಲ್ಲಿ ನನಗೆ ಅನೇಕ ಸ್ನೇಹಿತರಿದ್ದಾರೆ. ಮಮತಾ ದೀದಿ ಈಗಲೂ ಪ್ರತಿ ವರ್ಷ ವೈಯಕ್ತಿಕವಾಗಿ ನನಗೆ ಒಂದು ಅಥವಾ ಎರಡು ಕುರ್ತಾಗಳನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುವಿರಿ ಎಂದು ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರೊಂದಿಗಿನ ಸಂಭಾಷಣೆಯಲ್ಲಿ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...