ಉಡುಪಿ: ಕೊರೊನಾ ಸೋಂಕು ತಡೆಗೆ ಲಾಕ್ ಡೌನ್ ಜಾರಿ ಮಾಡಿದ್ದು, ಇದರಿಂದಾಗಿ ಸ್ಥಗಿತಗೊಂಡಿದ್ದ ಸಾಮೂಹಿಕ ಸಾರಿಗೆ ನಿಧಾನವಾಗಿ ಆರಂಭವಾಗತೊಡಗಿದೆ.
ಭಾನುವಾರ ಸಂಪೂರ್ಣ ಲಾಕ್ಡೌನ್ ಇರುವುದರಿಂದ ಸೋಮವಾರ ಬೆಳಗ್ಗೆಯಿಂದ ಮತ್ತೆ ವಾಹನಗಳ ಸಂಚಾರ ಆರಂಭವಾಗಲಿದೆ. ಉಡುಪಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಡಿಯಾಳಿ ಹಾಗೂ ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇ 25 ರಿಂದ 30 ರ ವರೆಗೆ 7 ಮಾರ್ಗಗಳಲ್ಲಿ ಉಚಿತವಾಗಿ ಸಿಟಿ ಬಸ್ ಸೇವೆ ಆರಂಭಿಸಲಾಗುವುದು.
ಶಾಸಕ ರಘುಪತಿ ಭಟ್ ಈ ಕುರಿತು ಮಾಹಿತಿ ನೀಡಿದ್ದು, ಲಾಕ್ಡೌನ್ ಸಡಿಲಿಕೆ ಬಳಿಕ ಅನೇಕ ಚಟುವಟಿಕೆಗಳು ಆರಂಭವಾಗಿವೆ. ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಜನ ಹೆಚ್ಚಿನ ಹಣ ಕೊಟ್ಟು ಕೆಲಸ ಕಾರ್ಯಗಳಿಗೆ ಹೋಗುವ ಪರಿಸ್ಥಿತಿ ಇದೆ. ಕೊರೊನಾ ಸೋಂಕು ಹರಡುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ನಿಯಮ ಪಾಲನೆಯೊಂದಿಗೆ ಸೋಂಕು ಭೀತಿಯನ್ನು ದೂರ ಮಾಡುವ ಉದ್ದೇಶದಿಂದ ಆಯ್ದ ಮಾರ್ಗಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆಯವರೆಗೆ ಉಚಿತವಾಗಿ ಸೇವೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸರ್ಕಾರದ ನಿಯಮಾವಳಿಯ ಅನುಸಾರ ಬಸ್ ಗಳ ಸಂಚರಿಸುತ್ತವೆ. 30 ಮಂದಿಗೆ ಮಾತ್ರ ಪ್ರಯಾಣಕ್ಕೆ ಅವಕಾಶವಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು. ಜೂನ್ 1 ರ ನಂತರ ಪ್ರಯಾಣಿಕರಿಂದ ಟಿಕೆಟ್ ದರ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.