ಶಿವಮೊಗ್ಗ: ಶ್ರೀಗಂಧ ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದವನನ್ನು ಬಂಧಿಸಿರುವ ಪೊಲೀಸರು 1.11 ಲಕ್ಷ ರೂ. ಮೌಲ್ಯದ 37 ಕೆಜಿ 620 ಗ್ರಾಂ ತೂಕದ ಶ್ರೀಗಂಧದ ತುಂಡು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪ ನಿವಾಸಿ ಇಫ್ತಿಕಾರ್ ಅಹಮ್ಮದ್(37) ದ್ವಿಚಕ್ರ ವಾಹನದಲ್ಲಿ ಶಿರಾಳಕೊಪ್ಪದಿಂದ ಚಿಕ್ಕಜಂಬೂರು ಗ್ರಾಮಕ್ಕೆ ಅಕ್ರಮವಾಗಿ ಶ್ರೀಗಂಧವನ್ನು ಕಳ್ಳತನದಿಂದ ಸಾಗಾಣೆ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ.
ಶಿಕಾರಿಪುರ ಉಪ ವಿಭಾಗದ ಎಎಸ್ಪಿ ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯಿಂದ 1,11,000 ರೂ. ಮೌಲ್ಯದ ಒಟ್ಟು 37 ಕೆಜಿ 620 ಗ್ರಾಂ ತೂಕದ ಶ್ರೀಗಂಧದ ತುಂಡುಗಳು ಹಾಗೂ ಚಕ್ಕೆಗಳನ್ನು ಮತ್ತು ಶ್ರೀಗಂಧ ಸಾಗಾಣಿಕೆ ಮಾಡಲು ಬಳಸಿದ 12,000 ರೂ. ಮೌಲ್ಯದ ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಇಫ್ತಿಕಾರ್ ಅಹ್ಮದ್ ವಿರುದ್ಧ ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಕಳ್ಳತನ ಮತ್ತು ಕರ್ನಾಟಕ ಅರಣ್ಯ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಮಾಹಿತಿ ನೀಡಿದ್ದಾರೆ.