ಬೆಂಗಳೂರು: ಮನೆ ಕಟ್ಟಲು ಅಗತ್ಯವಾದ ಮರಳು ಸುಲಭವಾಗಿ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದ್ದು ಹೊಸ ಮರಳು ನೀತಿ ಜಾರಿಗೆ ತಯಾರಿ ನಡೆಸಲಾಗಿದೆ.
ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊಸ ಮರಳು ನೀತಿ ಪ್ರಕಾರ ಮಾರ್ಗಸೂಚಿ ಹೊರಡಿಸಲು ಸಮಾಲೋಚನೆ ನಡೆಸಿದ್ದಾರೆ. ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮರಳು ನೀತಿಗೆ ಮೇ ಮೊದಲ ವಾರ ಸರ್ಕಾರ ಒಪ್ಪಿಗೆ ನೀಡಿದ್ದು, ಪ್ರತಿ ಮೆಟ್ರಿಕ್ ಟನ್ ಮರಳಿಗೆ 700 ರೂಪಾಯಿ ದರ ನಿಗದಿ ಮಾಡಲಾಗಿದೆ.
ಅಲ್ಲದೆ ಮರಳು ಬ್ಲಾಕ್ ಗುರುತಿಸುವ ಮತ್ತು ಪೂರೈಕೆ ಜವಾಬ್ದಾರಿಯನ್ನು ಸ್ಥಳೀಯ ಅಧಿಕಾರಿಗಳಿಗೆ ನೀಡಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಮೊಬೈಲ್ ಮೂಲಕ ಮರಳು ಬುಕಿಂಗ್ ಮಾಡಲು ಅವಕಾಶ ನೀಡಿದ್ದು ಪ್ರತಿ ಮೆಟ್ರಿಕ್ ಟನ್ ಮರಳಿಗೆ 700 ರೂಪಾಯಿ ನಿಗದಿ ಮಾಡಲಾಗಿದೆ. ಹೊಸ ನೀತಿಯ ಪ್ರಕಾರ ಮಾರ್ಗಸೂಚಿ ಜಾರಿಗೆ ತರುವ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಶೀಘ್ರವೇ ಹೊಸ ಮರಳು ನೀತಿ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.