ಬೆಂಗಳೂರು: ಸರ್ಕಾರಿ ನೌಕರರು, ಪಿಂಚಣಿದಾರರು ಮತ್ತು ಸಾಮಾಜಿಕ ಭದ್ರತಾ ಯೋಜನೆಯ ಫಲಾನುಭವಿಗಳಿಗೆ ವೇತನ, ಪಿಂಚಣಿ ನೀಡಲು ಸರ್ಕಾರಕ್ಕೆ ತಿಂಗಳಿಗೆ ಸುಮಾರು 5,500 ಕೋಟಿ ರೂಪಾಯಿಯಷ್ಟು ಹಣ ಬೇಕಿದೆ.
ಆದರೆ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಎಲ್ಲಾ ಆದಾಯ ಕುಂಠಿತವಾಗಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟವಾಗಿದೆ. ಸರ್ಕಾರದ ಖಜಾನೆ ಖಾಲಿಯಾಗುತ್ತಿರುವುದರಿಂದ ನೌಕರರಿಗೆ ಸಲೀಸಾಗಿ ಸಂಬಳ, ಪಿಂಚಣಿದಾರರಿಗೆ ಪಿಂಚಣಿ ನೀಡುವುದು ಕಷ್ಟಸಾಧ್ಯವೆನ್ನಲಾಗಿದೆ.
ಏಪ್ರಿಲ್ ತಿಂಗಳ ವೇತನ ನೀಡಲು ಯಾವುದೇ ಸಮಸ್ಯೆ ಇಲ್ಲ. ಆದರೆ ಮೇ ತಿಂಗಳ ವೇತನ ನೀಡಲು ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ. ನೌಕರರಿಗೆ ಪ್ರತಿ ತಿಂಗಳು ವೇತನ, ನಿವೃತ್ತರಿಗೆ ಪಿಂಚಣಿ ಮತ್ತು ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿದಾರರಿಗೆ 5,500 ಕೋಟಿ ಬೇಕಿದೆ.
ಆದರೆ ಮೇ ತಿಂಗಳ ವೇತನ ಪಿಂಚಣಿಗೆ ಹಣ ಹೊಂದಿಸುವುದು ಸಮಸ್ಯೆಯಾಗಿದೆ. ಮೇ ತಿಂಗಳ ವೇತನವನ್ನು ಜೂನ್ ತಿಂಗಳಿಗೆ ನೀಡಬೇಕಿದೆ. ಆರ್ಥಿಕ ಚಟುವಟಿಕೆ ಇಲ್ಲದಂತಾಗಿ ಆದಾಯ ಸಂಗ್ರಹ ಸ್ಥಗಿತಗೊಂಡಿರುವುದರಿಂದ ಸರ್ಕಾರಕ್ಕೆ ಆದಾಯ ಬರುತ್ತಿಲ್ಲ. ಹೀಗಾಗಿ ಗ್ರೀನ್ ಜೋನ್ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆಗೆ ಮತ್ತಷ್ಟು ಉತ್ತೇಜನ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.