ದಾವಣಗೆರೆ: ಏಪ್ರಿಲ್ 24 ಅಥವಾ 25 ರಿಂದ ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಪ್ರಾರಂಭವಾಗಲಿದ್ದು, ಮೇ 3 ರವರೆಗೆ ಅನ್ವಯವಾಗುವಂತೆ ಸರ್ಕಾರದ ಮಾರ್ಗದರ್ಶನಗಳನ್ನು ಮುಂದುವರೆಸಿ ದಾವಣಗೆರೆ ಜಿಲ್ಲೆಯಾದ್ಯಂತ ಬರುವ ಎಲ್ಲಾ ಮಸೀದಿ, ದರ್ಗಾಗಳಲ್ಲಿ ದೈನಂದಿನ ಮತ್ತು ರಂಜಾನ್ ಮಾಸದ ಸಾಮೂಹಿಕ ಪ್ರಾರ್ಥನೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಈ ಕೆಳಕಂಡಂತೆ ನಿಬಂಧನೆಗಳನ್ನು ವಿಧಿಸಿ ಮೇ 3 ರವರೆಗೆ ನಿಷೇಧಿಸಿ ಆದೇಶಿಸಲಾಗಿದೆ.
ಯಾವುದೇ ಮುಸ್ಲಿಂರಿಗೆ ಐದು ಹೊತ್ತಿನ ಪ್ರಾರ್ಥನೆ (ನಮಾಜ್)ಯನ್ನು ಶುಕ್ರವಾರ (ನಮಾಜ್) ಪ್ರಾರ್ಥನೆ ಸಹ ಒಳಗೊಂಡಂತೆ ಮತ್ತು ತರಾವಿ (ನಮಾಜ್) ಪ್ರಾರ್ಥನೆಯನ್ನು ಮಸೀದಿಯಲ್ಲಿ ಮಾಡಲು ನಿರ್ಬಂಧಿಸಲಾಗಿರುತ್ತದೆ.
ಮಸೀದಿಯ ಸಿಬ್ಬಂದಿಗಳು ಯಾವುದೇ ತರಹದ ಧ್ವನಿವರ್ಧಕಗಳನ್ನು ಮಸೀದಿಯಲ್ಲಿ ಐದು ಹೊತ್ತಿನ ಪ್ರಾರ್ಥನೆ(ನಮಾಜ್) ಯನ್ನು ಶುಕ್ರವಾರ (ನಮಾಜ್) ಪ್ರಾರ್ಥನೆ ಸಹ ಒಳಗೊಂಡಂತೆ ಮತ್ತು ತರ್ಹಾವಿ (ನಮಾಜ್) ಪ್ರಾರ್ಥನೆಗೆ ಬಳಸಲು ನಿರ್ಬಂಧಿಸಲಾಗಿದೆ.
ಆಜಾನ್ ನ್ನು ಕಡಿಮೆ ವಿದ್ಯುತ್ ಸಂಕೇತಗಳ ಪರಿಮಾಣದಲ್ಲಿ ನೀಡುವುದು ಹಾಗೂ ಮಸೀದಿಯ ಮೌಜಿನ್ ಅಥವಾ ಪೇಶ್ಇಮಾಂ ಇವರು ಸಹರಿ ಮತ್ತು ಇಫ್ತಾರ್ ಸಮಯವನ್ನು ಜನರಿಗೆ ಧ್ವನಿ ಕಡಿಮೆಗೊಳಿಸಿ ತಿಳಿಸಬೇಕು.
ಯಾವುದೇ ಇಫ್ತಾರ್ ಮತ್ತು ಸಹರಿಗಳಲ್ಲಿ ಸಾಮೂಹಿಕ ಭೋಜನಕೂಟ ಮಸೀದಿಗಳಲ್ಲಿ ಆಯೋಜಿಸುವಂತಿಲ್ಲ.
ಮೊಹಲ್ಲಾಗಳಲ್ಲಿ ಹಂಚಲು ಗಂಜಿ, ಆಶ್, ತಂಪುಪಾನೀಯ ಮತ್ತು ಇತರೆ ಮಸೀದಿಗಳ ಆವರಣದಲ್ಲಿ ತಯಾರಿಸುವಂತಿಲ್ಲ.
ಮಸೀದಿಗಳ ಸುತ್ತಮುತ್ತ ಯಾವುದೇ ಉಪಹಾರ ಅಂಗಡಿ ಹಾಕುವುದನ್ನು ನಿಷೇಧಿಸಲಾಗಿದೆ.
ಮಸೀದಿ ದರ್ಗಾಗಳ ವ್ಯವಸ್ಥಾಪನ ಕಮಿಟಿಯವರು ಮೇಲ್ಕಂಡ ನಿಬಂಧನೆಗಳನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-2019 (ಕೊರೊನಾ) ವೈರಸ್ ಸೋಂಕು ಹರಡದಂತೆ ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಈ ಹಿಂದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಇವರು ನೀಡಿರುವ ಆದೇಶಗಳನ್ನು ಜಾರಿಗೊಳಿಸಲು ನಿರ್ದೇಶಿಸಿರುತ್ತಾರೆ.
ತಪ್ಪಿದಲ್ಲಿ ವಕ್ಫ್ ಕಾಯಿದೆ 1995 ರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿರುತ್ತಾರೆ. ಎಲ್ಲಾ ಮಸೀದಿ/ದರ್ಗಾಗಳ ವ್ಯವಸ್ಥಾಪನ ಕಮಿಟಿಯವರು ಮಾರ್ಗದರ್ಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಪವಿತ್ರ ರಂಜಾನ್ ಮಾಸಾಚರಣೆಯನ್ನು ಶಾಂತಿಯಿಂದ ಆಚರಿಸಲು ಮನವಿ ಮಾಡಲಾಗಿದೆ.