ಬೆಂಗಳೂರು: ಎಲ್ಲ ಉದ್ಯಾನಗಳಲ್ಲಿ ವಾಯುವಿಹಾರಕ್ಕೆ 2 ಗಂಟೆ ಹೆಚ್ಚುವರಿಯಾಗಿ ಅವಕಾಶ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಬೆಂಗಳೂರು ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಿಸುತ್ತಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ಗೋವಿಂದರಾಜನಗರ ವಾರ್ಡ್ ನಲ್ಲಿ ನಿರ್ಮಾಣ ಮಾಡಿದ 30 ಹಾಸಿಗೆಗಳ ಹೆರಿಗೆ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಳಗ್ಗೆ 7 ರಿಂದ 10 ಗಂಟೆ, ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ವಾಯುವಿಹಾರ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ನಿಯಮ ಸಡಿಲಗೊಳಿಸಿದ ಮೊದಲು ಬೆಳಗ್ಗೆ 7 ರಿಂದ 9 ಮತ್ತು ಸಂಜೆ 5 ರಿಂದ 7 ಗಂಟೆಯವರೆಗೆ ವಾಯುವಿಹಾರಕ್ಕೆ ಅವಕಾಶ ನೀಡಲಾಗಿದ್ದು ಈಗ 2 ಗಂಟೆ ಹೆಚ್ಚಿನ ಅವಕಾಶ ನೀಡಲಾಗಿದೆ. ಬೆಳಿಗ್ಗೆ ಮತ್ತು ಸಂಜೆ ಹೆಚ್ಚುವರಿಯಾಗಿ 1 ಗಂಟೆ ವಾಯುವಿಹಾರಕ್ಕೆ ಅವಕಾಶ ನೀಡಲಾಗಿದೆ. ವಾಯುವಿಹಾರಿಗಳು ಉದ್ಯಾನವನದಲ್ಲಿನ ತೆರೆದ ಜಿಮ್ ಸಲಕರಣೆಗಳನ್ನು ಬಳಸಲು ಅವಕಾಶ ಇರುವುದಿಲ್ಲ. ಕೊರೊನಾ ಸೋಂಕು ಹರಡುವ ಕಾರಣಕ್ಕೆ ಜಿಮ್ ಸಲಕರಣೆ ಬಳಸಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ.