ಬೆಂಗಳೂರು: ಕೊರೋನಾ ಭಯದಿಂದಾಗಿ ಶಂಕಿತರ ಕ್ವಾರಂಟೈನ್ ಗೆ ಹಲವು ಕಡೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ವಾರಂಟೈನ್ ವಿರುದ್ಧ ರಾಜ್ಯದ ಹಲವೆಡೆ ಆಕ್ರೋಶ ಕೇಳಿದ್ದು ಜನವಸತಿ ಪ್ರದೇಶದಲ್ಲಿ ಕ್ವಾರಂಟೈನ್ ಮಾಡಬಾರದು ಎಂದು ಒತ್ತಾಯ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ತಂಡಗ ಗ್ರಾಮದ ಹಾಸ್ಟೆಲ್ ನಲ್ಲಿ 20 ಜನರ ಕ್ವಾರಂಟೈನ್ ಗೆ ಸಿದ್ಧತೆ ಮಾಡಲಾಗಿತ್ತು. ಇದಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದರಿಂದಾಗಿ ಬೇರೆ ಕಡೆ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವನಹಳ್ಳಿಯ ಶಾಲೆಯಲ್ಲಿ ಕ್ವಾರಂಟೈನ್ ಮಾಡಲು ವಿರೋಧ ವ್ಯಕ್ತವಾಗಿದೆ.
ಶಿವಮೊಗ್ಗದಲ್ಲಿಯು ಕ್ವಾರಂಟೈನ್ ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗ ತಾಲೂಕಿನ ಗೋಂದಿಚಟ್ನಹಳ್ಳಿ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದ್ದು, ಬಸ್ ನಲ್ಲಿ ಶಂಕಿತರನ್ನು ಕರೆತಂದಿದ್ದ ವೇಳೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಗೆ ಶಿವಮೊಗ್ಗ ಜಿಲ್ಲಾ ಆಡಳಿತ ವ್ಯವಸ್ಥೆ ಮಾಡಿದೆ ಎನ್ನಲಾಗಿದೆ. ಅದೇ ರೀತಿ ಭದ್ರಾವತಿಯಲ್ಲೂ ವಿರೋಧ ವ್ಯಕ್ತವಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿಯೂ ಕ್ವಾರಂಟೈನ್ ಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.