ಬೆಂಗಳೂರು: ಮುಂಗಾರು ಕೃಷಿ ಚಟುವಟಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 10,000 ಕೋಟಿ ರೂಪಾಯಿ ಸಾಲ ಸೌಲಭ್ಯ ಒದಗಿಸಬೇಕು. ಉಚಿತವಾಗಿ ಔಷಧ, ಗೊಬ್ಬರ, ಬಿತ್ತನೆ ಬೀಜ ನೀಡಬೇಕೆಂದು ವಿರೋಧ ಪಕ್ಷಗಳ ಮುಖಂಡರು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಬಸವರಾಜ ಹೊರಟ್ಟಿ, ಹೆಚ್.ಡಿ. ರೇವಣ್ಣ ಮೊದಲಾದವರು, ಕೊರೋನಾ ನಿರ್ವಹಣೆ ಮತ್ತು ಪರಿಹಾರ ಕಾರ್ಯಗಳಿಗೆ ರಾಜ್ಯಕ್ಕೆ 50,000 ಕೋಟಿ ವಿಶೇಷ ಪ್ಯಾಕೇಜ್ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಸಲಹೆ ನೀಡಿದ್ದಾರೆ.
ರೈತರು ಬೆಳೆದ ಹಣ್ಣು ತರಕಾರಿಗೆ ಸೂಕ್ತ ಮಾರುಕಟ್ಟೆ ಸಾರಿಗೆ ವ್ಯವಸ್ಥೆ ಮಾಡಬೇಕು. ಸರ್ಕಾರವೇ ರೈತರಿಂದ ಬೆಳೆ ಖರೀದಿಸಬೇಕು ಎಂದು ಹೇಳಲಾಗಿದೆ. ತೆಲಂಗಾಣ, ಕೇರಳ ಮಾದರಿಯಲ್ಲಿ 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ನೀಡಬೇಕು. ಸಣ್ಣ ಮಧ್ಯಮ ಅತಿ ಸಣ್ಣ ಕೈಗಾರಿಕೆಗಳಿಗೆ ನೆರವು ನೀಡಬೇಕು. ಕಲಾವಿದರು ವಿವಿಧ ಮಾಧ್ಯಮಗಳ ನೌಕರರು, ಬೀದಿಬದಿ ವ್ಯಾಪಾರಿಗಳು, ಮಂಗಳಮುಖಿಯರು, ಅಂಗವಿಕಲರು ಸೇರಿ ಶ್ರಮಿಕರಿಗೆ 10 ಸಾವಿರ ರೂಪಾಯಿ ನೀಡಬೇಕು ಎಂದು ಹೇಳಿದ್ದಾರೆ.