ಹುಬ್ಬಳ್ಳಿ: ಲಾಕ್ ಡೌನ್ ಜಾರಿಯಾದ ನಂತರ ತೀವ್ರ ಸಂಕಷ್ಟದಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಾಲವನ್ನು ಒಂದು ಸಲ ಮನ್ನಾ ಮಾಡಬೇಕೆಂದು ಉತ್ತರ ಕರ್ನಾಟಕ ಎಸ್ಸಿಎಸ್ಟಿ ಸಣ್ಣ ಉದ್ದಿಮೆದಾರರ ಸಂಘ ಆಗ್ರಹಿಸಿದೆ.
ದೇಶದಲ್ಲಿ ಅತ್ಯಂತ ಹೆಚ್ಚಿನ ಉದ್ಯೋಗ ಸೃಷ್ಟಿಸುವ ವಲಯವಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರ ಸಂಕಷ್ಟಕ್ಕೆ ಸಿಲುಕಿದೆ. ಮೇಕ್ ಇನ್ ಇಂಡಿಯಾ ಕನಸು ನನಸಾಗಲು ಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಪ್ರಧಾನಿಯವರು ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡಿದ್ದಾರೆ. ಅಂತೆಯೇ ಹೆಚ್ಚಿನ ಉದ್ಯೋಗ ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಕ್ಷೇತ್ರದ ಸಾಲವನ್ನು ಒಂದು ಬಾರಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆಗಳ ಉತ್ತೇಜನಕ್ಕೆ ಆರ್ಥಿಕ ನೆರವು ಘೋಷಣೆ ಮಾಡಿದೆ. ಎಲ್ಲಾ ಉದ್ದಿಮೆದಾರರಿಗೆ ಸಮರ್ಪಕವಾಗಿ ಆರ್ಥಿಕ ನೆರವು ತಲುಪಿಸಬೇಕು. ಆರ್ಥಿಕ ನೆರವು ನೀಡಿದರೂ, ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಸುಧಾರಣೆಗೆ ಇನ್ನೂ ಆರೇಳು ತಿಂಗಳು ಅವಕಾಶ ಬೇಕಿದೆ. ಈ ಅವಧಿಯಲ್ಲಿ ಸಾಲ ಮತ್ತು ಬಂಡವಾಳದ ಮೇಲಿನ ಬಡ್ಡಿ ಪಾವತಿಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಎಂಐ ಪಾವತಿಗೆ ಇನ್ನೂ ಒಂದು ವರ್ಷ ಸಮಯವಕಾಶ ನೀಡಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.