ಶಿವಮೊಗ್ಗ: ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರಿಗೆ ಎರಡು ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಅಡಮಾನ ಸಾಲ ನೀಡಲಾಗುವುದು.
ಶಿವಮೊಗ್ಗ ಜಿಲ್ಲೆ ಸಾಗರ ಎಪಿಎಂಸಿ ಅಧ್ಯಕ್ಷ ಹೆಚ್.ಎಂ. ರವಿಕುಮಾರ್ ಮತ್ತು ಉಪಾಧ್ಯಕ್ಷ ಅಣ್ಣಪ್ಪ ಭೀಮನೇರಿ ಈ ಕುರಿತು ಮಾಹಿತಿ ನೀಡಿದ್ದು, ಲಾಕ್ಡೌನ್ ಜಾರಿಯಾಗಿರುವುದರಿಂದ ಅಡಿಕೆ ವಹಿವಾಟು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ನೆರವಿಗೆ ನಿಲ್ಲುವುದು ಎಪಿಎಂಸಿ ಕರ್ತವ್ಯವಾಗಿದೆ. ರೈತರಿಗೆ ಸಾಲ ಸೌಲಭ್ಯ ಕಲ್ಪಿಸಲು 1.30 ಕೋಟಿ ರೂಪಾಯಿ ಮೀಸಲಿಡಲಾಗಿದೆ. ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ ಸಾಲಿನಲ್ಲಿ ಸಾಲ ಪಡೆದ ರೈತರಿಗೆ ಮಾರ್ಚ್ 21 ರಿಂದ ಜೂನ್ 31ರವರೆಗೆ ಸಾಲ ಮರುಪಾವತಿ ಅವಧಿ ವಿಸ್ತರಿಸಲಾಗಿದೆ. ರೈತರು ಜುಲೈ ಮೊದಲ ವಾರದಲ್ಲಿ ಸಾಲ ಮರುಪಾವತಿ ಮಾಡಲು ಅವಕಾಶ ನೀಡಲಾಗಿದೆ.
ಕೋರೋನಾ ಹಿನ್ನೆಲೆಯಲ್ಲಿ ಎಪಿಎಂಸಿಯಿಂದ ಎರಡು ಲಕ್ಷ ರೂಪಾಯಿ ವರೆಗೆ ಬಡ್ಡಿ ರಹಿತ ಅಡಮಾನ ಸಾಲ ನೀಡಲಾಗುವುದು. ಸರ್ಕಾರ ಖರೀದಿ ಕೇಂದ್ರ ಆರಂಭಿಸಿ ಮೆಕ್ಕೆಜೋಳ ಖರೀದಿಸಬೇಕು ಎಂದು ಅವರು ಹೇಳಿದ್ದಾರೆ.