ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಮೋಟಗಾನಹಳ್ಳಿ ಗ್ರಾಮದ ಸಮೀಪದ ಕೊತ್ತಗಾನಹಳ್ಳಿಯಲ್ಲಿ ವೃದ್ಧೆ ಮೇಲೆ ಚಿರತೆ ಭಯಾನಕ ದಾಳಿ ನಡೆಸಿದೆ.
ಮನೆಯ ಮುಂದಿನ ಮೇಲೆ ಮಲಗಿದ್ದ ಗಂಗಮ್ಮ(68) ಚಿರತೆ ದಾಳಿಗೆ ಬಲಿಯಾಗಿದ್ದಾರೆ. ಬೆಳಗಿನ ಜಾವ ದಾಳಿ ಮಾಡಿದ ಚಿರತೆ ಮನೆ ಜಗುಲಿ ಮೇಲೆ ಮಲಗಿದ್ದ ಗಂಗಮ್ಮ ಅವರ ಮೇಲೆ ಭೀಕರ ದಾಳಿ ಮಾಡಿದ್ದು ರುಂಡ ಮುಂಡಗಳನ್ನು ಬೇರ್ಪಡಿಸಿ ಮುಖ ತಿಂದು ಕೊಂದು ಹಾಕಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕಳೆದ 8 ದಿನಗಳ ಹಿಂದೆ ಮಾಗಡಿ ತಾಲೂಕು ಕದರಯ್ಯನಪಾಳ್ಯ ದಲ್ಲಿ ಮನೆಯೊಳಗೆ ನುಗ್ಗಿದ ಚಿರತೆ ಮೂರು ವರ್ಷದ ಮಗುವನ್ನು ಎಳೆದೊಯ್ದು ಕೊಂದು ಹಾಕಿತ್ತು.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದ್ದರಿಂದ ಅದೇ ಚಿರತೆ ಇರಬಹುದೆಂದು ಹೇಳಲಾಗಿತ್ತು. ಚಿರತೆ ಬೋನಿಗೆ ಬಿದ್ದಿದ್ದರಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದರು. ಆದರೆ ಮತ್ತೆ ಚಿರತೆ ದಾಳಿ ಮುಂದುವರೆದಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ ಎಂದು ಹೇಳಲಾಗಿದೆ.