ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಅರಣ್ಯ, ಪರಿಸರ, ಜೀವಿಶಾಸ್ತ್ರ ಇಲಾಖೆಯ ಪರಿಶೀಲನಾ ಸಭೆಯಲ್ಲಿ ಅರಣ್ಯ ಇಲಾಖೆಯ ಗಾರ್ಡ್ ಗಳನ್ನು ಖಾಯಂಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ನೀಲಗಿರಿ ಬೆಳೆಸಲು ಸರ್ಕಾರ ನಿಷೇಧಿಸಿರುವುದರಿಂದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತವು ಆರ್ಥಿಕ ನಷ್ಟದಲ್ಲಿರುವುದರಿಂದ ಗೇರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತಗಳನ್ನು ವಿಲೀನಗೊಳಿಸುವ ಬಗ್ಗೆ ಚರ್ಚಿಸಲಾಗಿದೆ. ಇದರ ಸಾಧಕ – ಬಾಧಕಗಳನ್ನು ಪರಿಶೀಲಿಸಿ ನಿರ್ಧಾರಕ್ಕೆ ಬರಲು ತೀರ್ಮಾನಿಸಲಾಗಿದೆ.
ಹಸಿರು ನ್ಯಾಯಾಧೀಕರಣದ ನಿರ್ದೇಶನಗಳ ಅನುಸಾರ ರಾಜ್ಯದ 17 ಅತ್ಯಂತ ಕಲುಷಿತ ನದಿ ಭಾಗಗಳ ಪುನಃಶ್ಚೇತನ ಕಾರ್ಯ ಪ್ರಗತಿಯಲ್ಲಿದೆ. ನಗರಗಳಲ್ಲಿ ವಾಯು ಗುಣಮಟ್ಟ ಪುನಃಶ್ಚೇತನಕ್ಕೆ ಕ್ರಮ ಕೈಗೊಂಡಿದ್ದು, ತೀವ್ರ ಕಲುಷಿತವೆಂದು ಗುರುತಿಸಲ್ಪಟ್ಟಿರುವ ಜಿಗಣಿ – ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಬೆಂಗಳೂರಿನ ಘನ ತ್ಯಾಜ್ಯ ವೈಜ್ಞಾನಿಕ ವಿಲೇವಾರಿ ಕ್ರಮಗಳ ಬಗ್ಗೆ ಎನ್.ಜಿ.ಟಿ. ನಿರ್ದೇಶಿಸಿದ್ದು, ಈ ಸಂಬಂಧ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೇ ರೀತಿ ಮಾವುತರನ್ನು ಕೌಶಲ್ಯ ಕೆಲಸಗಾರರೆಂದು ಪರಿಗಣಿಸಿ ಅವರಿಗೆ ಅರಣ್ಯ ರಕ್ಷಕರ ವೇತನ ನೀಡಲಾಗುವುದು. ವನ್ಯಜೀವಿಗಳ ದಾಳಿಯಿಂದ ಮರಣ ಹೊಂದುವವರಿಗೆ ನೀಡುವ ಪರಿಹಾರ ಧನದ ಮೊತ್ತವನ್ನು 7.50 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.