ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಕೃಷಿ ವಲಯಕ್ಕೆ ಕೊಡುಗೆ ನೀಡಿದ್ದಾರೆ. ಮೂರನೇ ಹಂತದ ಪ್ಯಾಕೇಜ್ ನಲ್ಲಿ ಮೆಕ್ಕೆಜೋಳ ಬೆಳೆಗಾರರು, ಆಶಾ ಕಾರ್ಯಕರ್ತೆಯರು, ಕುರಿ – ಮೇಕೆ ಸಾಕಾಣಿಕೆದಾರರಿಗೆ ನೆರವು ಘೋಷಿಸಿದ್ದಾರೆ.
ಮೆಕ್ಕೆಜೋಳ ಬೆಳೆಗಾರರಿಗೆ 5 ಸಾವಿರ ರೂಪಾಯಿ, ಆಶಾ ಕಾರ್ಯಕರ್ತೆಯರಿಗೆ 3000 ರೂ. ನೀಡುವ ಪ್ಯಾಕೇಜ್ ಪ್ರಕಟಿಸಿದ್ದಾರೆ. ಇದರೊಂದಿಗೆ ರಾಜ್ಯದ ವಿಶೇಷ ಪ್ಯಾಕೇಜ್ ಮೊತ್ತ 2272 ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ.
ಮೆಕ್ಕೆಜೋಳಕ್ಕೆ 1760 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಿದ್ದರೂ, ರೈತರಿಗೆ ಅಷ್ಟು ಬೆಲೆ ಸಿಗದ ಕಾರಣ ಮೆಕ್ಕೆಜೋಳ ಬೆಳೆದ 10 ಲಕ್ಷ ರೈತರಿಗೆ ತಲಾ 5 ಸಾವಿರ ರೂಪಾಯಿ ಸಹಾಯಧನ ನೀಡಲಾಗುವುದು. ಇದಕ್ಕಾಗಿ 500 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ 3000 ರೂ. ಪ್ರೋತ್ಸಾಹಧನ ನೀಡಲಿದ್ದು 12 ಕೋಟಿ ರೂಪಾಯಿ ಕಾಯ್ದಿರಿಸಲಾಗಿದೆ. ಸಹಕಾರ ಸಂಸ್ಥೆಗಳಿಂದ ಕ್ರೋಡೀಕರಿಸಿ ಸಹಕಾರ ಇಲಾಖೆಯ ವತಿಯಿಂದ ಈ ಮೊತ್ತವನ್ನು ನೀಡಲಾಗುವುದು.
ಅದೇ ರೀತಿ ನೈಸರ್ಗಿಕ ವಿಕೋಪದಿಂದ ಕುರಿ, ಮೇಕೆಗಳ ಸಾವು ಸಂಭವಿಸಿದ್ದಲ್ಲಿ ಸಾಕಾಣಿಕೆದಾರರಿಗೆ 5000 ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಲಾಗಿದೆ.