25 ಕ್ಕೂ ಹೆಚ್ಚು ಬಿಜೆಪಿ ಶಾಸಕರು ಸೇರಿ ಸಭೆ ನಡೆಸಿರುವ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ವಿಚಾರ, ಮಂತ್ರಿಸ್ಥಾನ ವಿಚಾರ ಮುಂದಿಟ್ಟುಕೊಂಡು ಸಭೆ ನಡೆಸಿದ್ದು, ಸಿಎಂಗೆ ಬೇಡಿಕೆ ಸಂದೇಶ ರವಾನಿಸಲಾಗಿದೆ. ಆದರೆ, ಮೇಲ್ನೋಟಕ್ಕೆ ರಾಜ್ಯಸಭೆ ಟಿಕೆಟ್ ಮತ್ತು ಮಂತ್ರಿಸ್ಥಾನಕ್ಕಾಗಿ ಕೆಲವು ಶಾಸಕರು ಸಭೆ ನಡೆಸಿದ್ದಾರೆ ಎಂದು ಬಿಂಬಿತವಾಗಿದ್ದರೂ, ಇದರ ಹಿಂದೆ ಬೇರೆಯದೇ ಉದ್ದೇಶವಿದೆ ಎನ್ನಲಾಗಿದೆ.
ಉತ್ತರ ಕರ್ನಾಟಕದ ಬಿಜೆಪಿ ಶಾಸಕರನ್ನು ಒಗ್ಗೂಡಿಸಿ ಶಕ್ತಿ ಪ್ರದರ್ಶನಕ್ಕೆ ಕೆಲವು ನಾಯಕರು ಮುಂದಾಗಿದ್ದಾರೆ. ಮೇಲ್ನೋಟಕ್ಕೆ ರಾಜ್ಯಸಭೆ ಟಿಕೆಟ್ ವಿಚಾರವಾಗಿ ಸಭೆ ನಡೆಸಲಾಗಿದೆ. ಸಚಿವ ಸ್ಥಾನ ಸಭೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಇದರ ಹಿಂದೆ ಶಕ್ತಿ ಪ್ರದರ್ಶನದ ಉದ್ದೇಶವಿದೆ ಎಂದು ಹೇಳಲಾಗಿದೆ.
ಬಿಜೆಪಿ ಹಿರಿಯ ನಾಯಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ ಸೇರಿದಂತೆ ಹಲವು ನಾಯಕರು ಉತ್ತರ ಕರ್ನಾಟಕದ ಭಾಗದ ಬಿಜೆಪಿ ಶಾಸಕರ ಸಭೆ ನಡೆಸಿ ಬಲಾಬಲ ಪ್ರದರ್ಶಿಸುವ ಮೂಲಕ ಮುಂದಿನ ರಾಜಕೀಯ ಹೆಜ್ಜೆ ಇಡಲು ಮುಂದಾಗಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದಾರೆ ಎನ್ನಲಾಗಿದೆ.
ಎನ್.ಆರ್. ಸಂತೋಷ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿರುವ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. 25ಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದು, ಚಿಕ್ಕೋಡಿಯಲ್ಲಿ ಜೊಲ್ಲೆ ಕುಟುಂಬ ಮತ್ತು ಕತ್ತಿ ಕುಟುಂಬದ ನಡುವಿನ ರಾಜಕೀಯ ವಿಚಾರ, ಪಕ್ಷದಲ್ಲಿನ ಬೆಳವಣಿಗೆ, ಸಚಿವ ಸಂಪುಟ ವಿಸ್ತರಣೆ, ನಾಯಕತ್ವ ವಿಚಾರವಾಗಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದ್ದು, ಶಾಸಕರು ಪ್ರತ್ಯೇಕ ಸಭೆ ನಡೆಸಿದ ವಿಚಾರ ಅನೇಕ ಬೆಳವಣಿಗೆಗೆ ಕಾರಣವಾಗಬಹುದು. ರಾಜ್ಯ ರಾಜಕೀಯದಲ್ಲಿ ತಿರುವು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.