ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಹೆನ್ನಲಿ ಗ್ರಾಮದ ಬಳಿ ನವದಂಪತಿ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ. ಗ್ರಾಮದ ಸಮೀಪದ ಹೇಮಾವತಿ ನದಿಯಲ್ಲಿ ದಂಪತಿಯ ಮೃತದೇಹ ಕಂಡು ಬಂದಿದ್ದು ಸಾವಿನ ಕುರಿತಾಗಿ ಅನುಮಾನ ಮೂಡಿದೆ.
ಬೇಲೂರು ತಾಲೂಕು ಮುರಹಳ್ಳಿ ಗ್ರಾಮದ ಅರ್ಥೇಶ್(27) ಮತ್ತು ಹೆನ್ನಲಿಗ್ರಾಮದ ಕೃತಿಕಾ(23) ಮೃತಪಟ್ಟವರು. ಇವರ ಮದುವೆ ಎರಡು ತಿಂಗಳ ಹಿಂದೆ ನಡೆದಿದೆ. ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಲಾಕ್ಡೌನ್ ಜಾರಿಯಾದ ಬಳಿಕ ಸ್ವಗ್ರಾಮಕ್ಕೆ ಬಂದಿದ್ದರು. ಬುಧವಾರ ಪತ್ನಿ ಮನೆಗೆ ಬಂದ ಅರ್ಥೇಶ್ ಗುರುವಾರ ಸಂಜೆ ತಿರುಗಾಡಿಕೊಂಡು ಬರುವುದಾಗಿ ಪತ್ನಿ ಜೊತೆಗೆ ಮನೆಯಿಂದ ಹೊರ ಹೋಗಿದ್ದಾರೆ.
ಆದರೆ ಬಹುಹೊತ್ತಿನವರೆಗೂ ಮನೆಗೆ ವಾಪಸ್ ಬಾರದ ಕಾರಣ ಮನೆಯವರು ಗಾಬರಿಯಿಂದ ಫೋನ್ ಮಾಡಿದ್ದಾರೆ. ಫೋನ್ ಸ್ವಿಚ್ ಆಫ್ ಬಂದಿದ್ದು ಹುಡುಕಾಟ ನಡೆಸಿದಾಗ ನದಿ ಸಮೀಪ ಬೈಕ್ ಕಾಣಿಸಿದೆ. ಬಳಿಕ ನದಿಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ. ಅವರ ಸಾವಿನ ಬಗ್ಗೆ ಅನುಮಾನ ಮೂಡಿದ್ದು, ಸಕಲೇಶಪುರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.