ಚಿಕ್ಕಮಗಳೂರು: ಜಿಲ್ಲೆಯಲ್ಲಿ ಸಮಾಜ ತಲೆತಗ್ಗಿಸುವಂತಹ ಘಟನೆ ನಡೆದಿದೆ. ರಸ್ತೆ ಸಂಪರ್ಕವಿಲ್ಲದ ಕಾರಣ ಮೃತದೇಹವನ್ನು ಮರದ ಬಡಿಗೆಗೆ ಕಟ್ಟಿಕೊಂಡು ಸುಮಾರು ಎರಡು ಕಿಲೋಮೀಟರ್ ದೂರ ಹೊತ್ತು ಸಾಗಿದ ಘಟನೆ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಕಳಸ ಸಮೀಪದ ಮನುಕುಬ್ರಿ ಗ್ರಾಮದಲ್ಲಿ ಗಿರಿಜನರು ಹೆಚ್ಚಾಗಿ ವಾಸವಾಗಿದ್ದಾರೆ. 50 ವರ್ಷದ ಮಹಿಳೆಯೊಬ್ಬರು ಅನಾರೋಗ್ಯದ ಕಾರಣ ಮೃತಪಟ್ಟಿದ್ದು ಅವರನ್ನು ಗ್ರಾಮಕ್ಕೆ ತರಲು ರಸ್ತೆಯಿಲ್ಲದ ಹಿನ್ನೆಲೆಯಲ್ಲಿ ಕಾಡಿನ ಕಾಲುದಾರಿಯಲ್ಲಿ ಮೃತದೇಹವನ್ನು ಹೊತ್ತು ಸಾಗಿದ್ದಾರೆ.
ಮಹಿಳೆಯ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿಯೂ ಇದೇ ರೀತಿ ಕೊಂಬೆಗೆ ಜೋಲಿ ಕಟ್ಟಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟ ನಂತರ ಮರದ ಬಡಿಗೆಗೆ ಕಟ್ಟಿಕೊಂಡು ಮೃತದೇಹ ಸಾಗಿಸಲಾಗಿದೆ. ಸ್ಥಳೀಯರ ಮೊಬೈಲ್ನಲ್ಲಿ ಈ ದೃಶ್ಯ ಸೆರೆಯಾಗಿದ್ದು ಜಾಲತಾಣಗಳಲ್ಲಿ ವೈರಲ್ ಆಗಿದೆ ಎನ್ನಲಾಗಿದೆ.