ಸಿಎಂ ಯಡಿಯೂರಪ್ಪ ಬದಲಾವಣೆಯ ಬೇಡಿಕೆಯನ್ನು ಮುಂದಿಟ್ಟು ಬಿಜೆಪಿ ಶಾಸಕರ ಪ್ರತ್ಯೇಕ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಶಾಸಕರ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಅವರ ಬಳಿ ನಾವೇನಾದರೂ ಕೇಳಿದರೆ ಸುಮ್ಮನೆ ಬರೆದುಕೊಳ್ಳುತ್ತಾರೆ. ಬಳಿಕ ಕಡೆಗಣಿಸುತ್ತಾರೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ನಾವು ಹೇಳಿದ ಯಾವುದೇ ಕೆಲಸವನ್ನು ಯಡಿಯೂರಪ್ಪ ಮಾಡಿಕೊಡುತ್ತಿಲ್ಲ. ಕೆಲಸ ಮಾಡಿಕೊಡುವುದಾಗಿ ಹೇಳಿ ಬಳಿಕ ಕಡೆಗಣಿಸುತ್ತಾರೆ ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ನಾವು ಹೇಳಿದ ಯಾವುದೇ ಕೆಲಸವನ್ನು ಯಡಿಯೂರಪ್ಪ ಮಾಡಿಕೊಡುತ್ತಿಲ್ಲ. ಯಡಿಯೂರಪ್ಪ ಹೆಸರಿನಲ್ಲಿ ಬೇರೆ ಯಾರೋ ಆಡಳಿತ ನಡೆಸುವಂತೆ ಕಾಣುತ್ತಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಶಾಸಕರೊಬ್ಬರು ಹೇಳಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಕ್ಷೇತ್ರಕ್ಕೆ 600 ಕೋಟಿ ರೂಪಾಯಿ ಕೊಡುವ ಮುಖ್ಯಮಂತ್ರಿಯವರು ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹಣವಿಲ್ಲ. ದುಡ್ಡು ಎಲ್ಲಿದೆ? ಎಂದೆಲ್ಲಾ ಹೇಳುತ್ತಾರೆ. ನಾವು ಆಡಳಿತ ಪಕ್ಷದ ಶಾಸಕರಾಗಿದ್ದುಕೊಂಡು ಸುಮ್ಮನೆ ಎಲ್ಲವನ್ನು ನೋಡಬೇಕಾ? ಸಿಎಂಗೆ ವಯಸ್ಸಾಗಿದೆ, ಯಡಿಯೂರಪ್ಪನವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ಬಹಿರಂಗವಾಗಿ ಹೇಳುವ ಸ್ಥಿತಿಯಲ್ಲಿ ಸದ್ಯಕ್ಕೆ ನಾವು ಇಲ್ಲವೆಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಶಾಸಕರೊಬ್ಬರು ಕೇಂದ್ರ ನಾಯಕರೊಂದಿಗೆ ಸಂಪರ್ಕ ಹೊಂದಿರುವ ರಾಜ್ಯದ ನಾಯಕರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ.
ಭಿನ್ನಮತೀಯ ಶಾಸಕರು ಉರುಳಿಸಿದ ದಾಳದ ಪರಿಣಾಮವೇನು ಎಂಬುದನ್ನು ಕಾದು ನೋಡಬೇಕಿದೆ. ಊಟದ ಸಭೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ತಲೆಕೆಡಿಸಿಕೊಳ್ಳದಿದ್ದರೂ ಮಾಹಿತಿ ಪಡೆದುಕೊಂಡಿದ್ದಾರೆ. ಹೈಕಮಾಂಡ್ ಗೆ ದೂರು ನೀಡುವ ಬಗ್ಗೆಯೂ ಶಾಸಕರ ಸಭೆಯಲ್ಲಿ ಚರ್ಚೆ ನಡೆಸಿರುವ ಬಗ್ಗೆ ಮತ್ತು ಬಿಜೆಪಿಯ ಪ್ರಮುಖ ನಾಯಕರೊಂದಿಗೆ ಸಮಾಲೋಚನೆ ನಡೆಸಿರುವ ಬಗ್ಗೆಯೂ ಯಡಿಯೂರಪ್ಪ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಮೇಲ್ನೋಟಕ್ಕೆ ರಾಜ್ಯಸಭೆ ಟಿಕೆಟ್, ಸಚಿವ ಸ್ಥಾನ ವಿಚಾರದಂತೆ ಕಂಡು ಬಂದರೂ, ಯಡಿಯೂರಪ್ಪನವರ ಬದಲಾವಣೆ ಅಜೆಂಡಾವನ್ನೇ ಮುಂದಿಟ್ಟುಕೊಂಡು ಶಾಸಕರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಯಡಿಯೂರಪ್ಪ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತವಾಗಿದೆ. ಈ ಮೂಲಕ ಭಿನ್ನಮತೀಯರು ಯಡಿಯೂರಪ್ಪ ಕುರ್ಚಿಗೆ ಗುರಿ ಇಟ್ಟಿದ್ದಾರೆ ಎನ್ನಲಾಗಿದ್ದು ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಆದರೆ, ಯಡಿಯೂರಪ್ಪ ಕುರ್ಚಿಯನ್ನು ಅಲ್ಲಾಡಿಸುವುದು ಅಷ್ಟು ಸುಲಭವೇನಲ್ಲ ಎಂದೂ ಹೇಳಲಾಗಿದೆ. ಕೊರೋನಾದಂತಹ ಸಂಕಷ್ಟದ ಸಂದರ್ಭದಲ್ಲಿ ಹೈಕಮಾಂಡ್ ಯಡಿಯೂರಪ್ಪ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ. ರಾಜಕೀಯವಾಗಿ ಅನೇಕ ಸವಾಲುಗಳು, ಭಿನ್ನಮತಗಳನ್ನು ಎದುರಿಸಿರುವ ಯಡಿಯೂರಪ್ಪನವರಿಗೆ ಇಂತಹ ಸಭೆ ಯಾವ ಲೆಕ್ಕಲ್ಲೂ ಇಲ್ಲವೆನ್ನಲಾಗಿದೆ. ವಯಸ್ಸಿನ ಹೊರತಾಗಿ ಯಾವುದೇ ಸಮಸ್ಯೆಯಿಂದ ಯಡಿಯೂರಪ್ಪ ಅವರನ್ನು ಅಲ್ಲಾಡಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗಿದೆ.
ಯಡಿಯೂರಪ್ಪನವರ ಬಗ್ಗೆ ವರಿಷ್ಠರಿಗೆ ಉತ್ತಮ ಅಭಿಪ್ರಾಯವಿದ್ದು, ಭಿನ್ನಮತಕ್ಕೆ ಸಮ್ಮತಿ ನೀಡುವ ಸಾಧ್ಯತೆ ಇಲ್ಲ. ಪ್ರತಿಕ ಸಭೆ ನಡೆಸಿದ ಶಾಸಕರ ಯಾವುದೇ ಬೇಡಿಕೆಗಳಿಗೆ ಬಿಜೆಪಿ ಹೈಕಮಾಂಡ್ ಸ್ಪಂದಿಸುವ ಪರಿಸ್ಥಿತಿಯಲ್ಲಿ ಇಲ್ಲ. ವಯಸ್ಸನ್ನು ಲೆಕ್ಕಿಸದೇ ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಯಡಿಯೂರಪ್ಪನವರ ಬಗ್ಗೆ ಕಾರ್ಯವೈಖರಿ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಅವರನ್ನು ಬದಲಾಯಿಸುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಹೇಳಲಾಗಿದೆ.