ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬೇರೆಯವರನ್ನು ನಾಯಕರನ್ನಾಗಿ ಮಾಡಲು ಬಿಜೆಪಿಯ ಕೆಲವು ಶಾಸಕರು ಮುಂದಾಗಿದ್ದು ರಹಸ್ಯವಾಗಿ ಪ್ರಯತ್ನ ನಡೆಸಿದ್ದಾರೆ.
ಕೇಂದ್ರ ಸಚಿವರೊಬ್ಬರ ಮೂಲಕ ಈ ಪ್ರಯತ್ನ ಆರಂಭಿಸಲಾಗಿದ್ದು ಆದರೆ ಬೇರೆ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಸಮುದಾಯದ ವಿರೋಧ ವ್ಯಕ್ತವಾಗಬಹುದು ಎಂಬ ಕಾರಣಕ್ಕೆ ಲಿಂಗಾಯಿತ ಸಚಿವರೊಬ್ಬರಿಗೆ ನಾಯಕತ್ವ ವಹಿಸಿಕೊಳ್ಳಲು ಹೇಳಲಾಗಿದೆ ಎನ್ನಲಾಗಿದೆ.
ಆದರೆ, ನಮ್ಮ ಪ್ರಯತ್ನದಿಂದ ಅವರು ಯಾಕೆ ಮುಖ್ಯಮಂತ್ರಿಯಾಗಬೇಕೆಂದು ಕೆಲವು ಶಾಸಕರು ಹೇಳಿದ್ದು ಬೇರೆ ಸಮುದಾದಯದ ಸಚಿವರಿಗೆ ಪಟ್ಟ ಕಟ್ಟಿದರೆ ಲಿಂಗಾಯಿತರ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ. ಬೇರೆ ಸಮುದಾಯದ ನಾಯಕರನ್ನು ಸಿಎಂ ಮಾಡುವ ಬದಲು ನಮ್ಮ ಸಮುದಾಯದ ರಾಜ್ಯದ ಸಚಿವರನ್ನು ಸಿಎಂ ಆಗಿ ಆಯ್ಕೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಂಡಾಯ ನಾಯಕನಾಗಿ ಬರುವುದಿಲ್ಲ ಎಂದು ‘ಆ’ ಸಚಿವ ಹೇಳಿದ್ದು ಹೈಕಮಾಂಡ್ ಸೂಚಿಸಿದರೆ ಮಾತ್ರ ನೋಡುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದೆಹಲಿಯಿಂದಲೇ ರಾಜ್ಯ ರಾಜಕೀಯದ ಬೆಳವಣಿಗೆಗಳನ್ನು ನಿಯಂತ್ರಿಸಿ ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಬಗ್ಗೆ ಚರ್ಚೆ ನಡೆದಿದೆ.
ಇದಕ್ಕೆಲ್ಲ ಕಾರಣ ಸಿಎಂ ಪುತ್ರ ವಿಜಯೇಂದ್ರ ಅವರ ಅತಿಯಾದ ಆಡಳಿತ ಹಸ್ತಕ್ಷೇಪ ಎನ್ನಲಾಗಿದ್ದು ಅವರ ವಿರುದ್ಧ ಅಸಮಾಧಾನಗೊಂಡಿರುವ ಹೆಚ್ಚಿನ ಬಿಜೆಪಿ ಶಾಸಕರು ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ. ಹಿಂದೆಯೇ ಈ ಪ್ರಯತ್ನ ಆರಂಭವಾಗಿ ಕೊರೋನಾ ಕಾರಣದಿಂದ ನಿಂತಿತ್ತು. ಈಗ ಮತ್ತೆ ಮುಂದುವರೆದಿದೆ ಎಂದು ಹೇಳಲಾಗಿದೆ.