ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಲ್ತಾನಪುರದಲ್ಲಿ 28 ವರ್ಷದ ವ್ಯಕ್ತಿ ಕೊಳವೆ ಬಾವಿಗೆ ಬಿದ್ದಿದ್ದಾರೆ. ಸುಲ್ತಾನಪುರದ ಲಕ್ಕಪ್ಪ ಸಂಗಪ್ಪ ದೊಡ್ಡಮನಿ ಕೊಳವೆ ಬಾವಿಗೆ ಬಿದ್ದ ರೈತ ಎಂದು ಹೇಳಲಾಗಿದೆ.
ಕೆಲವು ದಿನಗಳ ಹಿಂದೆ ತಮ್ಮದೇ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಗೆ ಅವರು ಬಿದ್ದಿದ್ದಾರೆ. ಸೋಮವಾರ ಬೆಳಿಗ್ಗೆ ಕೊಳವೆ ಬಾವಿ ಸಮೀಪ ಅವರ ಶರ್ಟ್ ಮತ್ತು ಪಂಚೆ ಕಂಡುಬಂದಿದ್ದು ಕೊಳವೆಬಾವಿಯಲ್ಲಿ ಗಮನಿಸಿದಾಗ ಬಾವಿಯೊಳಗೆ ಸಿಲುಕಿರುವುದು ಗೊತ್ತಾಗಿದೆ.
ಅವರೇ ಆಕಸ್ಮಿಕವಾಗಿ ಕೊಳವೆ ಬಾವಿಯೊಳಗೆ ಬಿದ್ದರೆ ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದಾರೆಯೇ ಎನ್ನುವುದು ಗೊತ್ತಾಗಿಲ್ಲ. ಇನ್ನು ಅವರು ಬದುಕಿದ್ದಾರೆಯೇ ಇಲ್ಲವೇ ಎನ್ನುವುದು ಕೂಡ ತಿಳಿದುವಂದಿಲ್ಲ ಎನ್ನಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್, ಅಗ್ನಿಶಾಮಕದಳದ ಸಿಬ್ಬಂದಿ ಮತ್ತು ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದ್ದು, ಹಾರೋಗೇರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.