ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕರೋನಾ ಮಹಾಮಾರಿ ಭಾರತಕ್ಕೂ ವಕ್ಕರಿಸಿದ್ದು, ಇದಕ್ಕೆ ಈಗಾಗಲೇ 778 ಮಂದಿ ಬಲಿಯಾಗಿದ್ದಾರೆ. 24 ಸಾವಿರಕ್ಕೂ ಅಧಿಕ ಸೋಂಕು ಪೀಡಿತರಿದ್ದು, ಅವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಕಳೆದ ಒಂದು ತಿಂಗಳಿನಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದು, ಮೇ 3ರವರೆಗೆ ಇದು ಮುಂದುವರಿಯಲಿದೆ. ಇದರ ಮಧ್ಯೆ ರಾಜ್ಯ ಸರ್ಕಾರ ಕೆಲವೊಂದು ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಸಿ ಆದೇಶ ಹೊರಡಿಸಿದೆ.
ಆದರೆ ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ಆಡಳಿತ ಪಕ್ಷದ ಶಾಸಕರುಗಳಿಂದಲೇ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಲಾಗಿದೆ. ಕಡೆ ಪಕ್ಷ ಮೇ 3 ರವರೆಗೆ ಕಟ್ಟುನಿಟ್ಟಾಗಿ ಲಾಕ್ ಡೌನ್ ಮುಂದುವರಿಸಬೇಕಿತ್ತೆಂಬ ಅಭಿಪ್ರಾಯ ಈ ಶಾಸಕರುಗಳದಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ಆರ್ಥಿಕ ಪುನಶ್ಚೇತನಕ್ಕೆ ಇದು ಅನಿವಾರ್ಯ ಎಂದು ಸಮಜಾಯಿಷಿ ನೀಡಿದ್ದಾರೆನ್ನಲಾಗಿದೆ.
ಈ ಬೆಳವಣಿಗೆ ನಡುವೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಕರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳು ಲಾಕ್ಡೌನ್ ಸಡಿಲಿಕೆ ಕುರಿತಂತೆ ತಮ್ಮ ನಿರ್ಧಾರ ಮರು ಪರಿಶೀಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.