ರಾಜ್ಯ ಕ್ಯಾಬಿನೆಟ್ ಸಭೆ ಮುಕ್ತಾಯಗೊಂಡಿದೆ. ಸಭೆ ನಂತ್ರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಯುವುದಾಗಿ ಹೇಳಿದ್ದಾರೆ. ಮೇ 4ರ ನಂತ್ರ ಕಂಟೈನ್ಮೆಂಟ್ ವಲಯ ಬಿಟ್ಟು ಬೇರೆ ಪ್ರದೇಶಗಳಲ್ಲಿ ಕೈಗಾರಿಕೆಗೆ ಅನುಮತಿ ನೀಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಸಂಜೆ ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಯಲಿದ್ದು, ಅಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆಂದು ಯಡಿಯೂರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿರುವುದು ಖುಷಿ ಸುದ್ದಿ ಎಂದ ಸಿಎಂ ಮಾಧ್ಯಮಗಳಿಗೆ ಧನ್ಯವಾದ ಹೇಳಿದ್ದಾರೆ. ಪ್ರಧಾನಿ ಸೂಚನೆ ನಂತ್ರ ಲಾಕ್ ಡೌನ್ ಗೆ ವಿನಾಯಿತಿ ಎಂದ ಸಿಎಂ, ಕೊರೊನಾ ಇನ್ನು ನಾಲ್ಕೈದು ತಿಂಗಳು ಕಾಡುವ ಸಾಧ್ಯತೆಯಿದೆ. ಆದ್ರೆ ಅದ್ರ ಜೊತೆ ಆರ್ಥಿಕತೆಯನ್ನು ಮುನ್ನಡೆಸಬೇಕೆಂದು ಹೇಳಿದ್ದಾರೆ. ಸಲೂನ್ ತೆರೆಯುವ ಬಗ್ಗೆಯೂ ಮೇ 3ರ ನಂತ್ರ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಜೊತೆಗೆ ಹಸಿರು ವಲಯದಲ್ಲಿ ಆರ್ಥಿಕ ಚಟುವಟಿಕೆಗೆ ಅನುವು ಮಾಡಿಕೊಡಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಹೀಗಾಗಿ ಮೇ 3 ರ ಬಳಿಕ ಮದ್ಯ ಮಾರಾಟ ಆರಂಭವಾಗಬಹುದೆಂಬ ಊಹಾಪೋಹಗಳು ಹರಿದಾಡುತ್ತಿವೆ.
ಇದಕ್ಕೂ ಮುನ್ನ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ ಲಾಕ್ ಡೌನ್ ಸಡಿಲಿಕೆ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ. ಹಾಗೆ ಮೇ 3ರವರೆಗೆ ಮದ್ಯ ಮಾರಾಟ ಆಗುವುದಿಲ್ಲ ಎಂದವರು ಹೇಳಿದ್ದಾರೆ. ಮೇ 3ರವರೆಗೆ ಸದ್ಯ ಜಾರಿಯಲ್ಲಿರುವ ಕಾನೂನು ಮುಂದುವರೆಯಲಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.