ಕಳೆದ ಒಂದೂವರೆ ತಿಂಗಳಿಂದ ಮದ್ಯ ಸಿಗದೆ ಕುಡುಕರು ಕಂಗಾಲಾಗಿ ಹೋಗಿದ್ದಂತೂ ಸತ್ಯ. ಎಣ್ಣೆ ಬೇಕು ಎಣ್ಣೆ ಬೇಕು ಅಂತಾ ಪ್ರತಿ ನಿತ್ಯ ಗೋಳಾಡುವ ದೃಶ್ಯಗಳು, ಸರ್ಕಾರಕ್ಕೆ ಮನವಿ ಮಾಡುವ ವಿಡಿಯೋಗಳನ್ನು ನೋಡುತ್ತಲೇ ಇದ್ದೆವು. ಇನ್ನು ಕೆಲವರಂತೂ ಮದ್ಯ ಸಿಗದೇ ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇಷ್ಟೆಲ್ಲ ಘಟನೆಗಳ ನಂತರ ಮದ್ಯದಂಗಡಿಗಳು ತೆರೆಯಲು ಸರ್ಕಾರ ಅನುಮತಿ ನೀಡಿದೆ.
ಹೀಗಾಗಿ ಇಂದಿನಿಂದ ಮದ್ಯದ ಅಂಗಡಿಗಳು ತೆರೆದಿವೆ. ರಾಜ್ಯಾದ್ಯಂತ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಮದ್ಯದ ಅಂಗಡಿಗಳು ಇಂದು ಓಪನ್ ಆಗಿವೆ. ಒಂದಿಷ್ಟು ಷರತ್ತುಗಳನ್ನು ಹಾಕಿ ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಮದ್ಯ ವ್ಯಸನಿಗಳು, ಮದ್ಯ ಸೇವಿಸುವವರು ಫುಲ್ ಖುಷಿಯಿಂದ ಬೆಳಗ್ಗೆಯೇ ಸರದಿ ಸಾಲಿನಲ್ಲಿ ನಿಂತು ಮದ್ಯ ಕೊಂಡುಕೊಳ್ಳುತ್ತಿದ್ದಾರೆ. ಮದ್ಯ ಸಿಕ್ಕಿರುವುದು ಇವರ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಈ ಸಂಭ್ರಮವನ್ನು ಒಂದೊಂದು ರೀತಿ ಸಂಭ್ರಮಿಸುತ್ತಾ ಇದ್ದಾರೆ ಹಲವರು. ಇದೀಗ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲೂ ಇಂತಹದ್ದೇ ಘಟನೆ ನಡೆದಿದೆ.
ಮದ್ಯ ಸಿಕ್ಕ ಖುಷಿಗೆ ವ್ಯಕ್ತಿಯೊಬ್ಬ ದೇವರ ಮುಂದೆ ಕೂತು ಧ್ಯಾನ ಮಾಡಿದ್ದಾನೆ. ಈ ಊರಿನ ಹನುಮಂತ ದೇವರ ಗುಡಿ ಮುಂದೆ ಮದ್ಯದ ಬಾಟಲ್ ಇಟ್ಟು ಧ್ಯಾನ ಮಾಡಿರುವ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.