alex Certify ಆಧಾರ್, ಡಿಎಲ್ ನೀಡಿದ ಆಟೋ – ಟ್ಯಾಕ್ಸಿ ಚಾಲಕರಿಗೆ 5000 ರೂ. ಪರಿಹಾರ ನೀಡಲು ಆದೇಶಿಸಿದ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಧಾರ್, ಡಿಎಲ್ ನೀಡಿದ ಆಟೋ – ಟ್ಯಾಕ್ಸಿ ಚಾಲಕರಿಗೆ 5000 ರೂ. ಪರಿಹಾರ ನೀಡಲು ಆದೇಶಿಸಿದ ಸರ್ಕಾರ

ಬೆಂಗಳೂರು: ಲಾಕ್ಡೌನ್ ಜಾರಿಯಾದ ಬಳಿಕ ಸಂಕಷ್ಟದಲ್ಲಿರುವ ಆಟೋ ಚಾಲಕರು ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ 5 ಸಾವಿರ ರೂಪಾಯಿ ಪರಿಹಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಕುರಿತು ಕೆಳಕಂಡ ಷರತ್ತಿಗೆ ಒಳಪಟ್ಟು ಮಂಜೂರಾತಿ ನೀಡಿ ಆದೇಶಿಸಿದೆ. ಎಲ್ಲಾ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಸ್ವೀಕರಿಸಬೇಕು. 2020ರ ಮಾರ್ಚ್ 24 ರ ಒಳಗೆ ಚಾಲನಾ ಪರವಾನಿಗೆ ಪ್ರಮಾಣಪತ್ರ(ಡಿಎಲ್) ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ಹೊಂದಿದ ವಾಹನಗಳಿಗೆ ಮಾತ್ರ ಹಾಗೂ ಮಾರ್ಚ್ 24ರಂದು ಚಾಲ್ತಿಯಲ್ಲಿದ್ದ ಚಾಲನಾ ಪರವಾನಿಗೆ ಸಂಖ್ಯೆಗಿಂತ ಹೆಚ್ಚು ಫಲಾನುಭವಿಗಳು ಇಲ್ಲದಂತೆ ಖಚಿತಪಡಿಸಿಕೊಳ್ಳುವುದು.

ಆಧಾರ್ ಕಾರ್ಡ್, ಡಿಎಲ್, ವಾಹನ ನೋಂದಣಿ ಸಂಖ್ಯೆ ಅನನ್ಯವಾಗಿರುವುದು ಎಲ್ಲಾ ಫಲಾನುಭವಿಗಳಿಗೆ ಕಡ್ಡಾಯವಾಗಿರುತ್ತದೆ. ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಇದು ಅನ್ವಯವಾಗಲಿದ್ದು, ಮ್ಯಾಕ್ಸಿಕ್ಯಾಬ್ ಗಳಿಗೆ ಅನ್ವಯಿಸುವುದಿಲ್ಲ. ಪರಿಹಾರ ಕೇವಲ ಅನುಜ್ಞಾ ಪತ್ರವನ್ನು ಹೊಂದಿರುವ ಮತ್ತು ಅಗತ್ಯವಿರುವ ಚಾಲಕರ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ಸಂದಾಯವಾಗಬೇಕು.

ಒಂದು ವೇಳೆ ಆಟೋ, ಟ್ಯಾಕ್ಸಿ ಮಾಲೀಕರಿಗೆ ಸಂದಾಯವಾದಲ್ಲಿ ಕೆಲವೊಂದು ಮಾಲೀಕರು ಹೆಚ್ಚಿನ ಸಂಖ್ಯೆಯ ಆಟೋ, ಟ್ಯಾಕ್ಸಿ ಗಳನ್ನು ಹೊಂದಿದ್ದು ಅವರಿಗೆ ಪರಿಹಾರ ಧನ ಸಂದಾಯವಾದಲ್ಲಿ ಜೀವನ ನಿರ್ವಹಣೆ ಎದುರಿಸುತ್ತಿರುವ ಚಾಲಕರಿಗೆ ಸಿಗದಂತಾಗುತ್ತದೆ. ಹಾಗಾಗಿ ಡುಪ್ಲಿಕೇಶನ್ ಅಥವಾ ಡಬಲ್ ಪೇಮೆಂಟ್ ಆಗದಂತೆ ಎಚ್ಚರಿಕೆ ವಹಿಸಬೇಕು.

ಅವರುಗಳ ಆಧಾರ್ ಕಾರ್ಡ್, ಪಾನ್ ಕಾರ್ಡ್ ಬ್ಯಾಂಕ್ ಖಾತೆಗೆ ಅನನ್ಯವಾಗಿ ಲಿಂಕ್ ಆಗಿರುವ ಬಗ್ಗೆ ಗಮನಹರಿಸಿ ಹಣ ವರ್ಗಾವಣೆ ಮಾಡಬೇಕು. ಯಾವುದೇ ಮಧ್ಯಂತರ ಸಂಪರ್ಕ ಇರಬಾರದು. ಫಲಾನುಭವಿಗಳು ಮತ್ತು ಸರ್ಕಾರದ ನೇರ ಸಂಪರ್ಕ ಇರಬೇಕು.

ಕೆಲವು ಫಲಾನುಭವಿಗಳ ಆರ್ಥಿಕ ಸ್ಥಿತಿ ಅವರ ಅಗತ್ಯದ ಬಗ್ಗೆ ಗಮನ ಹರಿಸಬೇಕು. ಅರ್ಹ ಫಲಾನುಭವಿಗಳಿಂದ ಲಾಕ್ಡೌನ್ ಅವಧಿಯಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿ ಇಲ್ಲದಿರುವ ಬಗ್ಗೆ ಸ್ವಯಂ ದೃಢೀಕರಣ ಪಡೆದು ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.

ಸರ್ಕಾರ ವಹಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಗಣನೆಗೆ ತೆಗೆದುಕೊಂಡು ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಅರ್ಜಿ ಸ್ವೀಕರಿಸಲು ಅಗತ್ಯವಿರುವ ಸಾಫ್ಟ್ ವೇರ್ ಸಿದ್ಧಪಡಿಸಲು ಎರಡು-ಮೂರು ದಿನ ಸಮಯವಕಾಶ ಬೇಕಿದ್ದು, ಈ ವ್ಯವಸ್ಥೆ ಕಾರ್ಯರೂಪಕ್ಕೆ ಬಂದ ಕೂಡಲೇ ಮಾಹಿತಿ ನೀಡಲಾಗುವುದು. ನಂತರ ಆಟೋ ಟ್ಯಾಕ್ಸಿ, ಚಾಲಕರು ತಮ್ಮ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ ಮೂಲಕ ಸಲ್ಲಿಸಬೇಕೆಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...