ಮಂಗಳೂರು: ಆಘಾತಕಾರಿ ಘಟನೆಯಲ್ಲಿ ಸೋಂಕಿತನ ಮೊಬೈಲ್ ಮುಟ್ಟಿದ ಪೊಲೀಸ್ ಕಾನ್ ಸ್ಟೇಬಲ್ ಗೂ ಕೊರೋನಾ ಸೋಂಕು ತಗುಲಿರುವುದು ಗೊತ್ತಾಗಿದೆ.
ಮೇ 14 ರಂದು ಮಹಾರಾಷ್ಟ್ರದಿಂದ ರಾಯಗಢದಿಂದ ಬಂದಿದ್ದ ವ್ಯಕ್ತಿಯನ್ನು ಕ್ವಾರಂಟೈನ್ ನಲ್ಲಿ ಇರಿಸಿದ್ದು, ಬಳಿಕ ಬಂಟ್ವಾಳ ತಾಲೂಕಿನ ವಿಟ್ಲಕ್ಕೆ ಸ್ಥಳಾಂತರ ಮಾಡಲಾಗುತ್ತಿತ್ತು. ಅಂಬುಲೆನ್ಸ್ ನಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಪೊಲೀಸ್ ಠಾಣೆ ಬಳಿ ಆಂಬುಲೆನ್ಸ್ ನಲ್ಲಿ ತಪಾಸಣೆ ನಡೆಸಲಾಗಿದೆ.
ಆಗ ಸೋಂಕಿತ ವ್ಯಕ್ತಿ ಆಧಾರ್ ಕಾರ್ಡ್ ಕೊಟ್ಟಿದ್ದು, ಅದನ್ನು ನೋಡಿದ ಪೊಲೀಸ್ ವಾಪಸ್ ಕೊಟ್ಟಿದ್ದಾರೆ. ಸೋಂಕಿತನಿಂದ ಪಡೆದ ಮೊಬೈಲ್ ಅನ್ನು ಹೆಡ್ ಕಾನ್ ಸ್ಟೇಬಲ್ ಗೆ ಕೊಟ್ಟಿದ್ದು, ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಸೋಂಕಿತನಿಂದ ಆಧಾರ್ ಕಾರ್ಡ್, ಮೊಬೈಲ್ ಪಡೆದ ಪೊಲೀಸ್ ಗೆ ಸೋಂಕು ತಗುಲಿಲ್ಲ. ಆದರೆ, ಪೊಲೀಸ್ ನಿಂದ ಮೊಬೈಲ್ ಪಡೆದು ಬಳಸಿದ ಹೆಡ್ ಕಾನ್ ಸ್ಟೇಬಲ್ ಗೆ ಕೊರೋನಾ ಸೋಂಕು ತಗುಲಿದೆ ಎನ್ನಲಾಗಿದೆ.
ಆದರೆ, ಮೊಬೈಲ್ ಮುಟ್ಟಿದ ಕಾರಣಕ್ಕೆ ಹೆಡ್ ಕಾನ್ ಸ್ಟೇಬಲ್ ಗೆ ಸೋಂಕು ತಗುಲಿದೆ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಸೋಂಕಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಅವರ ಸಮೀಪಕ್ಕೆ ಬಂದ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗಿದೆ.