ಚೀನಾದಲ್ಲಿ ಆರಂಭವಾದ ಕರೋನಾ ಮಹಾಮಾರಿ ಭಾರತದಲ್ಲೂ ತನ್ನ ಆಟಾಟೋಪ ತೋರಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದೆ. ಇದರಿಂದಾಗಿ ಈವರೆಗೆ ವ್ಯಾಪಾರ – ವಹಿವಾಟುಗಳು, ಉದ್ದಿಮೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು.
ಲಾಕ್ ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲೇ ಹೋಟೆಲ್ ನಡೆಸಲು ಅನುಮತಿ ನೀಡಿದ್ದ ರಾಜ್ಯ ಸರ್ಕಾರ ಕೇವಲ ಪಾರ್ಸೆಲ್ ಮಾತ್ರ ನೀಡಬೇಕೆಂದು ಸೂಚಿಸಿತ್ತು. ಅಲ್ಲದೆ ಸಂಜೆ 6.30 ರವರೆಗೆ ವ್ಯಾಪಾರ ನಡೆಸಬೇಕೆಂದು ಆದೇಶಿಸಲಾಗಿತ್ತು. ಈಗ ಆ ಆದೇಶದಲ್ಲಿ ಮಾರ್ಪಾಡು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಹೋಟೆಲ್ ಉದ್ಯಮಿಗಳು ತಮ್ಮನ್ನು ಭೇಟಿಯಾದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಭರವಸೆ ನೀಡಿದ್ದು, ಕೆಂಪು ವಲಯವನ್ನು ಹೊರತುಪಡಿಸಿ ಇತರೆ ವಲಯಗಳಲ್ಲಿ ರಾತ್ರಿ 10 ಗಂಟೆಯವರೆಗೆ ವ್ಯಾಪಾರ ನಡೆಸಲು ಅನುವು ಮಾಡಿಕೊಳ್ಳುವುದಾಗಿ ಹೇಳಿದ್ದಾರೆ. ಈ ಕುರಿತ ಆದೇಶ ಒಂದೆರಡು ದಿನಗಳ ಒಳಗಾಗಿ ಹೊರಬೀಳಲಿದೆ ಎಂದು ಹೇಳಲಾಗಿದೆ.