ದಕ್ಷಿಣ ಕನ್ನಡದ ಅತಿ ದೊಡ್ಡ ಪಟ್ಟಣಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಪುತ್ತೂರಿನಲ್ಲಿರುವ ಮಹತೋಭಾರ ಮಹಾಲಿಂಗೇಶ್ವರ ಸನ್ನಿಧಿ ಬಲು ಪ್ರಸಿದ್ಧವಾದುದು. ಇದು ಮಂಗಳೂರಿನಿಂದ 52 ಕಿ.ಮೀ. ದೂರದಲ್ಲಿದೆ.
ಈ ದೇಗುಲವನ್ನು 11 ಮತ್ತು 12 ನೇಯ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈಶ್ವರ ಇಲ್ಲಿನ ಮುಖ್ಯ ದೇವರು. ಬಹುತೇಕ ಈ ಊರಿನ ಹಾಗೂ ಆಸುಪಾಸಿನ ಎಲ್ಲಾ ಅಂಗಡಿ ಹಾಗೂ ಮನೆಗಳಲ್ಲಿ ಈ ದೇವರ ಚಿತ್ರ ಇರುವುದು ವಿಶೇಷ. ಪುತ್ತೂರಿನ ರಕ್ಷಕ ಎಂದೇ ಇಲ್ಲಿ ಶಿವನನ್ನು ನಂಬಲಾಗಿದೆ. ದೇಗುಲದ ಆವರಣದ ಪಶ್ಚಿಮ ಬದಿಯಲ್ಲಿ ನೀರಿನ ಕೊಳವೊಂದಿದೆ. ಇಲ್ಲಿ ಪುರಾತನ ಕಾಲದಲ್ಲಿ ಮುತ್ತು ಸಿಕ್ಕಿತ್ತು ಎನ್ನಲಾಗುತ್ತದೆ.
ಪ್ರತಿ ವರ್ಷ ಏಪ್ರಿಲ್ ತಿಂಗಳಿನಲ್ಲಿ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. 10 ದಿನ ರಥೋತ್ಸವದಲ್ಲಿ ಬೆಡಿ (ಪಟಾಕಿ)ಯ ವರ್ಣರಂಜಿತ ಪ್ರದರ್ಶನ ಇರುತ್ತದೆ. ಇದನ್ನು ವೀಕ್ಷಿಸಲೆಂದೇ ಸಾವಿರಾರು ಜನ ಆಗಮಿಸುತ್ತಾರೆ. ಬೆಳಿಗ್ಗೆ 5.30 ರಿಂದ ಮಧ್ಯಾಹ್ನ 1, ಸಂಜೆ 4ರಿಂದ 8 ಗಂಟೆಯವರೆಗೆ ಭಕ್ತಾದಿಗಳು ಕ್ಷೇತ್ರಕ್ಕೆ ಅಗಮಿಸಬಹುದು. ಪುತ್ತೂರು ನಗರದಿಂದ ಒಂದೂವರೆ ಕಿ.ಮೀ. ದೂರದಲ್ಲಿದ್ದು ಸಾಕಷ್ಟು ಬಸ್ ವ್ಯವಸ್ಥೆ ಇದೆ.