ಸ್ವಂತ ಮನೆ ಹೊಂದಬೇಕೆಂಬ ಕನಸು ಎಲ್ಲರಿಗೂ ಇರುತ್ತದೆ. ಆದರೆ ನಾನಾ ಕಾರಣಗಳಿಂದಾಗಿ ಇದು ಸಾಧ್ಯವಾಗುವುದಿಲ್ಲ. ಅದರಲ್ಲೂ ಬಡ ಜನತೆಯ ಸೂರಿನ ಕನಸು ಬಹುತೇಕ ಕನಸಾಗಿಯೇ ಉಳಿದು ಹೋಗುತ್ತದೆ.
ಇದೀಗ ವಸತಿ ಸಚಿವ ವಿ. ಸೋಮಣ್ಣ ಸ್ವಂತ ಸೂರು ಹೊಂದಲು ಬಯಸುವ ಬಡ ಜನತೆಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಬಡವರಿಗಾಗಿ ರಾಜ್ಯದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಅರ್ಹ ಬಡವರಿಗೆ ಮಾತ್ರ ಸರ್ಕಾರದ ವಸತಿ ಯೋಜನೆಗಳ ಪ್ರಯೋಜನ ಸಿಗಬೇಕು ಎಂದು ಹೇಳಿರುವ ಸಚಿವ ಸೋಮಣ್ಣ, ಒಂದು ವೇಳೆ ಅಧಿಕಾರಿಗಳು, ಜನಪ್ರತಿನಿಧಿಗಳು ಅನರ್ಹರಿಗೆ ಮನೆ ಮಂಜೂರು ಮಾಡಿದರೆ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.