ಕೊರೊನಾ ಮಹಾಮಾರಿ ಜಗತ್ತೇ ಮಂಡಿಯೂರುವಂತೆ ಮಾಡಿದೆ. ಎಷ್ಟೋ ಪ್ರಾಣಗಳನ್ನು ಬಲಿ ತೆಗೆದುಕೊಂಡ ಕೊರೊನಾ ತನ್ನ ಅಟ್ಟಹಾಸವನ್ನು ನಿಲ್ಲಿಸಿಲ್ಲ. ರಾಜ್ಯದಲ್ಲಿ 500 ಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ತಗುಲಿದೆ. ಸುಮಾರು 23 ಮಂದಿ ಇದಕ್ಕೆ ಬಲಿಯಾಗಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಹೋಲಿಸಿಕೊಂಡರೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೋಂಕಿತರು ಇದ್ದಾರೆ.
ಈಗಾಗಲೇ ಪಾಲಿಕೆ ಹಾಗೂ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ. ಬೆಂಗಳೂರಿನಲ್ಲಿ ಒಟ್ಟು ನಾಲ್ಕು ವಾರ್ಡ್ ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆ ಪ್ರದೇಶಗಳಿಗೆ ಯಾರೂ ಹೋಗುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಇದನ್ನು ಹೊರತುಪಡಿಸಿ ಸೋಕಿತರು ಇರುವ ಪ್ರದೇಶಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.
ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಲೇ ಹಾಟ್ ಸ್ಪಾಟ್ ಗಳ ಸಂಖ್ಯೆ ಕೂಡ ಬೆಂಗಳೂರಿನಲ್ಲಿ ಕಡಿಮೆಯಾಗಿತ್ತು. ಆದರೆ ಇದೀಗ ಮತ್ತೆ ಹಾಟ್ ಸ್ಪಾಟ್ ಗಳ ಸಂಖ್ಯೆ ಏರಿಕೆಯಾಗಿದೆ. ನಗರದಲ್ಲಿ ಒಟ್ಟು 44 ಹಾಟ್ ಸ್ಪಾಟ್ ವಾರ್ಡ್ ಗಳನ್ನು ಗುರುತಿಸಲಾಗಿದೆ. ದೀಪಾಂಜಲಿ ನಗರ ಮತ್ತು ಬೊಮ್ಮನಹಳ್ಳಿ ವಲಯದ ಬಿಳೇಕಹಳ್ಳಿ ವಾರ್ಡ್ ನಲ್ಲಿ ವೃದ್ಧರಿಬ್ಬರಿಗೆ ಸೋಂಕು ತಗುಲಿದ್ದು, ಈ ವಾರ್ಡ್ ಗಳು ಇದೀಗ ಕೊರೊನಾ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ.