ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದ ವೇಳೆ ಸ್ಟಿಂಗ್ ಆಪರೇಷನ್ ನಲ್ಲಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ, ಮೊಮ್ಮಗ ಶಶಿಧರ್ ಹಾಗೂ ಅಳಿಯ ವಿರೂಪಾಕ್ಷ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2017 ರಲ್ಲಿ 537 ಕೋಟಿ ರೂ. ಬಿಡಿಎ ಹೌಸಿಂಗ್ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಎಲ್ 1 ಆಗಿದ್ದ ರಾಮಲಿಂಗಂ ಎಂಬುವವರಿದ್ದರು. ಈ ಟೆಂಡರ್ ಗೆ 2020 ಜೂನ್ 22ರಂದು ಸಿಎಂ ಯಡಿಯೂರಪ್ಪ ಒಪ್ಪಿಗೆ ಸೂಚಿಸಿದ್ದಾರೆ. ಈ ಟೆಂಡರ್ ವಿಚಾರಕ್ಕೆ ಸಂಬಂಧಿಸಿದಂತೆ ರಾಮಲಿಂಗಂ ಅವರಿಗೆ ಸಿಎಂ ಪುತ್ರ ವಿಜಯೇಂದ್ರ 10 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ನಮ್ಮ ಬಳಿ ಸಂಪೂರ್ಣ ಮಾಹಿತಿ ಇದೆ ಎಂದು ಹೇಳಿದರು.
ವಿಜಯೇಂದ್ರ ಹಣ ಕೇಳಿರುವ ಬಗ್ಗೆ ವಾಟ್ಸಾಪ್ ಮೆಸೇಜ್ ನಲ್ಲಿ ದಾಖಲೆಯಿದೆ. ರಾಮಲಿಂಗಂ ಅವರಿಂದ ಬಿಡಿಎ ಆಯುಕ್ತರಾಗಿದ್ದ ಪ್ರಕಾಶ್ ಎಂಬಾತ ವಿಜಯೇಂದ್ರಗೆ ಹಣ ನೀಡುವುದಾಗಿ ಹೇಳಿ 12 ಕೋಟಿ ರೂ. ಹಣ ಪಡೆದಿದ್ದಾರೆ. ಆದರೆ ವಿಜಯೇಂದ್ರಗೆ ಹಣವನ್ನೇ ನೀಡಿಲ್ಲ. ಈ ಬಗ್ಗೆ ವಿಜಯೇಂದ್ರ ಅವರು ಕಮೀಷನರ್ ತನಗೆ ಹಣ ನೀಡಿಯೇ ಇಲ್ಲ. ಕಮೀಷನರ್ ಗೆ ಹಣ ಕೊಟ್ಟಿದ್ದರೆ ವಾಪಸ್ ಪಡೆದು 12 ಕೋಟಿ ಜೊತೆ 5 ಕೋಟಿ ಸೇರಿಸಿ ಹಣ ನೀಡುವಂತೆ ಕೇಳುತ್ತಾರೆ. ನಂತರದಲ್ಲಿ ಸಿಎಂ ಯಡಿಯೂರಪ್ಪ ಮೊಮ್ಮಗ ಶಶಿಧರ್ ಅಕೌಂಟ್ ಗೆ 7.40 ಕೋಟಿ ರೂ. ಆರ್.ಟಿ.ಜಿ.ಎಸ್. ಮಾಡಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಒಟ್ಟಾರೆ ಈ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು, ಸಿಎಂ ಯಡಿಯೂರಪ್ಪ ನೈತಿಕತೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.