ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ಪ್ರಸ್ತುತ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ಎಂದೇ ಪರಿಗಣಿಸಲಾಗುತ್ತಿದ್ದು, ಎಲ್ಲೆಡೆ ಗೌರವ ಸಲ್ಲಿಸಲಾಗುತ್ತಿದೆ. ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಇವರುಗಳು ಕೊರೊನಾ ಸೋಂಕಿತರ ಶುಶ್ರೂಷೆಗೆ ಶ್ರಮಿಸುತ್ತಿದ್ದು, ಇದರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶಿವಮೊಗ್ಗದಲ್ಲಿ 6 ಮಂದಿ ವೈದ್ಯಕೀಯ ಸಿಬ್ಬಂದಿಯನ್ನು ಅಮಾನತು ಮಾಡಲಾಗಿತ್ತು.
ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿದ್ದ ಚೇತನಾ ಕುಮಾರಿ, ಪವಿತ್ರಾ, ಭಾವನಾ, ರವಿ, ಪದ್ಮರಾಜ್ ಮತ್ತು ಅರುಣ್ ಅವರನ್ನು ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂಬ ಕಾರಣಕ್ಕೆ ಸಿಮ್ಸ್ ನಿರ್ದೇಶಕ ಡಾ. ಗುರುಪಾದಪ್ಪ ಅಮಾನತುಗೊಳಿಸಿದ್ದರು.
ಕೊರೊನಾ ಸೋಂಕಿತರ ಶುಶ್ರೂಷೆಯಲ್ಲಿ ತೊಡಗಿರುವವರನ್ನು ಅವರ ಕರ್ತವ್ಯದ ಬಳಿಕ ತಾತ್ಕಾಲಿಕವಾಗಿ ಪ್ರತ್ಯೇಕ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಹೀಗೆ ತಮಗೆ ವಾಸ್ತವ್ಯ ಕಲ್ಪಿಸಲಾದ ವಸತಿ ಗೃಹದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ. ಊಟ ಸಮರ್ಪಕವಾಗಿ ಪೂರೈಸಬೇಕೆಂದು ಇವರುಗಳು ಹೇಳಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಅಮಾನತುಗೊಳಿಸಲಾಗಿತ್ತು.
ಆದರೆ ಸಾರ್ವಜನಿಕ ವಲಯದಿಂದ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕೊರೊನಾ ವಾರಿಯರ್ಸ್ ಗಳನ್ನು ಅಮಾನತುಗೊಳಿಸಿದ್ದಕ್ಕೆ ಆಕ್ಷೇಪಿಸಿದ್ದರು. ಇದಕ್ಕೆ ಮಣಿದು ಈಗ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.