ಕೊರೊನಾ ಸೋಂಕು ತಡೆಗಟ್ಟಲು ಕೇಂದ್ರ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಕೆಲಸವಿಲ್ಲದ ಕಾರಣ ಒಂದು ಹೊತ್ತಿನ ಊಟಕ್ಕೂ ಅವರು ಪರದಾಡುವಂತಾಗಿದ್ದು, ಈ ಹಿನ್ನೆಲೆಯಲ್ಲಿ ವಾಪಾಸ್ ತಮ್ಮ ತವರಿಗೆ ಮರಳಲು ಮುಂದಾಗಿದ್ದರು.
ಆದರೆ ಆ ಸಂದರ್ಭದಲ್ಲಿ ಬಸ್, ರೈಲು ಸಂಚಾರ ಸಂಪೂರ್ಣ ಬಂದ್ ಆಗಿದ್ದ ಕಾರಣ ಕಾಲ್ನಡಿಗೆಯಲ್ಲೇ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೊರಟಿದ್ದು, ಮಾರ್ಗ ಮಧ್ಯದಲ್ಲಿ ಹಲವಾರು ಮಂದಿ ದುರಂತ ಸಾವನ್ನಪ್ಪಿದ್ದರು. ಇದೀಗ ವಲಸೆ ಕಾರ್ಮಿಕರು ಊರುಗಳಿಗೆ ತೆರಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಸ್ ಹಾಗೂ ರೈಲಿನ ಸೌಲಭ್ಯ ಕಲ್ಪಿಸಿಕೊಡುತ್ತಿವೆ.
ಇದರ ಮಧ್ಯೆ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ವಿದ್ಯಾರ್ಥಿಗಳು ಮಾಡಿರುವ ಕಾರ್ಯವೊಂದು ಎಲ್ಲರ ಗಮನ ಸೆಳೆಯುತ್ತಿದೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ 175ಕ್ಕೂ ಅಧಿಕ ವಲಸೆ ಕಾರ್ಮಿಕರಿಗೆ ಮುಂಬೈನಿಂದ ತವರು ರಾಜ್ಯ ಜಾರ್ಖಂಡ್ ನ ರಾಂಚಿಗೆ ತೆರಳಲು ವಿಮಾನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ಮೊದಲ ಬಾರಿಗೆ ವಿಮಾನ ಏರಿದ ಈ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ತಮ್ಮ ವಿಮಾನದ ಟಿಕೆಟ್ ಹಣ ನೀಡಿದ್ದಾರೆಂಬ ವಿಚಾರ ತಿಳಿದು ಕಣ್ಣೀರಾಗಿದ್ದಾರೆ. ತಮ್ಮ ಕಷ್ಟವನ್ನು ಅರಿತು ಸ್ಪಂದಿಸಿದ ನ್ಯಾಷನಲ್ ಲಾ ಸ್ಕೂಲ್ ವಿದ್ಯಾರ್ಥಿಗಳಿಗೆ ಮನದುಂಬಿ ಹರಸಿದ್ದಾರೆ.