ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಕಳೆದ ಹಲವು ವರ್ಷಗಳಿಂದ ಮರೀಚಿಕೆಯಾಗಿದ್ದು, ಹಲವಾರು ಕಾರಣಗಳಿಗೆ ವರ್ಗಾವಣೆ ಮುಂದೂಡಿಕೆ ಅಥವಾ ಸ್ಥಗಿತವಾಗುತ್ತಲೇ ಬರುತ್ತಿದೆ. ಹೀಗಾಗಿ ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರು ನಿರಾಸೆಗೊಳಗಾಗುವಂತಾಗಿದೆ.
ಈ ಬಾರಿ ವರ್ಗಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಲು ಕ್ರಮ ಕೈಗೊಳ್ಳುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಇದಕ್ಕೆ ಪೂರಕ ಪ್ರಕ್ರಿಯೆಗಳು ಸಹ ನಡೆದಿದ್ದು, ಆದರೆ ಕರೋನಾ ಮಹಾಮಾರಿ ವರ್ಗಾವಣೆ ಪ್ರಕ್ರಿಯೆಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ.
ಕರೋನಾ ಆರ್ಭಟ ದಿನೇ ದಿನೇ ಹೆಚ್ಚುತ್ತಿರುವ ಪರಿಣಾಮ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಸಲು ಶಿಕ್ಷಣ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಅಲ್ಲದೆ ನಿಯಮ ರೂಪಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲವೆನ್ನಲಾಗಿದೆ. ಜೊತೆಗೆ ಶೈಕ್ಷಣಿಕ ವರ್ಷವೂ ಮುಂದೂಡಿಕೆಯಾಗುವ ಸಾಧ್ಯತೆ ಇರುವುದರಿಂದ ಬಹುತೇಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಡೌಟ್ ಎಂದು ಹೇಳಲಾಗಿದೆ.