ದೇಶದಲ್ಲಿ ವಕ್ಕರಿಸಿಕೊಂಡಿರುವ ಕರೋನಾ ಮಹಾಮಾರಿ ರಾಜ್ಯದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದೆ. ಕರೋನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಮೇ 3ರವರೆಗೆ ಇದು ಮುಂದುವರಿಯಲಿದೆ.
ಮಾರಣಾಂತಿಕ ಕರೋನಾಗೆ ದೇಶದಲ್ಲಿ ಈಗಾಗಲೇ 683 ಮಂದಿ ಬಲಿಯಾಗಿದ್ದು, 20 ಸಾವಿರಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದಾರೆ. ಕರೋನಾ ವೈರಸ್ ವಯಸ್ಸಾದವರಿಗೆ ಮಾರಣಾಂತಿಕವಾಗಿ ಪರಿಣಮಿಸಲಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಅಂತವರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಹೇಳಲಾಗುತ್ತಿದೆ.
ಇದರ ಮಧ್ಯೆ ರಾಜ್ಯ ಸರ್ಕಾರ 50 ವರ್ಷ ಮೇಲ್ಪಟ್ಟ ಮಧುಮೇಹ, ಉಸಿರಾಟದ ತೊಂದರೆ, ಮೂತ್ರಪಿಂಡ ಕಾಯಿಲೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳನ್ನು ಸಡಿಲಿಸಿ ರಜೆ ಮಂಜೂರು ಮಾಡಲು ಆದೇಶ ಹೊರಡಿಸಿದೆ. ಈ ನೌಕರರು ಸುರಕ್ಷಿತ ವಲಯದಲ್ಲಿ ಸ್ವಯಂ ಕ್ವಾರಂಟೈನ್ ಆಗಿರಲು ಅವಕಾಶವಿದ್ದು, ಅಂಥವರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ಹಾಜರು ಮಾಡದೆ ಮೇ 4ರ ವರೆಗೆ ರಜೆ ಪಡೆಯಲು ಅರ್ಹರಾಗಿದ್ದಾರೆ.