ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ವಿಷಯ ಆತಂಕಕ್ಕೆ ಕಾರಣವಾಗಿತ್ತು. ಈ ವೈದ್ಯರು ನೂರಾರು ಜನರ ಜೊತೆ ಸಂಪರ್ಕ ಹೊಂದಿದ್ದ ಕಾರಣ ಅವರುಗಳಿಗೂ ಸೋಂಕು ತಗುಲಿದ್ದರೆ ಎಂಬ ಭೀತಿ ವ್ಯಕ್ತವಾಗಿತ್ತು.
ಆದರೆ ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ವೈದ್ಯರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬ ಸಂಗತಿ ಬೆಳಕಿಗೆ ಬಂದಿದೆ. ಆರು ಬಾರಿ ನಡೆಸಿದ ಪರೀಕ್ಷೆಯಲ್ಲಿಯೂ ನೆಗೆಟಿವ್ ಬಂದಿದ್ದು, ಹೀಗಾಗಿ ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಕೇಂದ್ರದಿಂದ ಮನೆಗೆ ಕಳುಹಿಸಲಾಗುತ್ತಿದೆ.
ಪ್ರಯೋಗಾಲಯದ ಲೋಪದಿಂದಾಗಿ ವೈದ್ಯರ ಗಂಟಲು ದ್ರವ ಪರೀಕ್ಷಾ ವರದಿ ಮೊದಲಿಗೆ ಪಾಸಿಟಿವ್ ಬಂದಿತ್ತೆಂದು ಹೇಳಲಾಗಿದ್ದು, ಇದೀಗ ವೈದ್ಯರಿಗೆ ಕೊರೊನಾ ಸೋಂಕು ಇರಲಿಲ್ಲವೆಂಬ ಸಂಗತಿಯಿಂದ ಜನತೆ ನಿರಾಳರಾಗಿದ್ದಾರೆ.